ADVERTISEMENT

ಬಳ್ಳಾರಿ ಉಸ್ತುವಾರಿ ಶ್ರೀರಾಮುಲುಗೆ ಆದ್ಯತೆ ಸಿಗಲಿ: ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 6:00 IST
Last Updated 7 ಫೆಬ್ರುವರಿ 2020, 6:00 IST
ಆನಂದ್‌ ಸಿಂಗ್
ಆನಂದ್‌ ಸಿಂಗ್    

ಹೊಸಪೇಟೆ:‘ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡುವೆ’ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಬೆಂಗಳೂರಿನಿಂದ ಶುಕ್ರವಾರ ಕ್ಷೇತ್ರಕ್ಕೆ ಹಿಂತಿರುಗಿದ ನಂತರ ಇಲ್ಲಿ ಹಮ್ಮಿಕೊಂಡಿರುವ ಭಟ್ರಹಳ್ಳಿ ಆಂಜನೇಯ ಸ್ವಾಮಿ ಕಳಸ ಹಾಗೂ ಹಾಗೂ ನವಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೆ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಒಪ್ಪಿಕೊಳ್ಳುವೆ. ಆದರೆ, ಅದಕ್ಕೂ ಮುನ್ನ ಶ್ರೀರಾಮುಲು ಅವರಿಗೆ ಆದ್ಯತೆ ಕೊಡುವಂತೆ ತಿಳಿಸುತ್ತೇನೆ. ಸ್ವತಃ ಶ್ರೀರಾಮುಲು ಅವರ ಅಭಿಪ್ರಾಯ ಪಡೆದು ಮುಂದುವರೆಯುವೆ’ಎಂದು ತಿಳಿಸಿದರು.

ADVERTISEMENT

‘ಯಾರ ತ್ಯಾಗದಿಂದ ಸರ್ಕಾರ ರಚನೆಯಾಗಿದೆ ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗೊತ್ತು. ಯಾವ ಖಾತೆ ಕೊಡಬೇಕು ಎನ್ನುವುದು ಅವರಿಗೆ ಬಿಟ್ಟದ್ದು. ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ’ ಎಂದರು.

‘ಮಂತ್ರಿಯಾಗೋದು ನನ್ನ ಉದ್ದೇಶವಾಗಿರಲಿಲ್ಲ. ವಿಜಯನಗರ ಜಿಲ್ಲೆ ಮಾಡೋದೆ ನನ್ನ ಗುರಿ. ಜಿಲ್ಲೆಯಾದರೆ ಮಾತ್ರ ನನ್ನ ಬೇಡಿಕೆ ಈಡೇರಿದಂತೆ. ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಪಂಪಾ ವಿರೂಪಾಕ್ಷೇಶ್ವರ ಆಶೀರ್ವಾದ ಮಾಡುತ್ತಾನೆ ಎಂಬ ಭರವಸೆ ಇದೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.