ADVERTISEMENT

ಎಸ್‌. ಲಿಂಗರಾಜು ಕುಸ್ತಿಗೂ ಸೈ, ಓಟಕ್ಕೂ ಸೈ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 14:42 IST
Last Updated 24 ಡಿಸೆಂಬರ್ 2019, 14:42 IST
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಜಯಿಸಿದ ಎಸ್‌. ಲಿಂಗರಾಜು‌
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಜಯಿಸಿದ ಎಸ್‌. ಲಿಂಗರಾಜು‌   

ಸಿರುಗುಪ್ಪ: ಇಲ್ಲಿನ ಚಾಗಿ ನರಸಮ್ಮ–ನರಸಯ್ಯ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಎಸ್‌. ಲಿಂಗರಾಜು ಅವರು ಕುಸ್ತಿಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಆ ಕ್ರೀಡೆಯಲ್ಲಿ ಹೆಸರು ಮಾಡುತ್ತಿದ್ದಾರೆ.

ಓಟ, ಉದ್ದ ಜಿಗಿತದಲ್ಲೂ ಲಿಂಗರಾಜು ಮುಂದಿದ್ದಾರೆ. ಹಲವೆಡೆ ನಡೆದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಓದಿನಲ್ಲೂ ಮುಂದಿದ್ದಾರೆ.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ADVERTISEMENT

ತಾಲ್ಲೂಕು ಮಟ್ಟದ 200 ಮೀಟರ್‌ ಓಟದ ಸ್ಪರ್ಧೆ, ಉದ್ದ ಜಿಗಿತದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಜಿಲ್ಲಾಮಟ್ಟದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅದೇ ಶಾಲೆಯಲ್ಲಿ ಓದುತ್ತಿರುವ ಅವರ ಸಹೋದರ ಚಿದಾನಂದ 100 ಹಾಗೂ 200 ಮೀಟರ್ ಓಟ, ಉದ್ದ ಜಿಗಿತದಲ್ಲಿ ಉತ್ತಮ ಸಾಧನೆ ತೋರಿ ವೀರಾಗ್ರಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಳ್ಯಂ ಗ್ರಾಮದ ರೈತ ಶಂಕ್ರಪ್ಪನವರ ಇಬ್ಬರೂ ಮಕ್ಕಳು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿ, ಹೆಸರು ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ.

‘ನನಗೆ ಮೊದಲಿನಿಂದಲೂ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ. ಚೆನ್ನಾಗಿ ಓದಿ, ಉತ್ತಮ ಆರೋಗ್ಯ ಕಾಯ್ದುಕೊಂಡು ಐ.ಪಿ.ಎಸ್‌. ಅಧಿಕಾರಿ ಆಗಬೇಕು ಎನ್ನುವ ಕನಸಿದೆ. ಅದಕ್ಕೆ ಬೇಕಾದ ಅಗತ್ಯ ತಯಾರಿ ಈಗಿನಿಂದಲೇ ಮಾಡಿಕೊಳ್ಳುತ್ತಿರುವೆ. ಅದಕ್ಕೆ ಮನೆ ಹಾಗೂ ಶಾಲೆಯಲ್ಲಿ ಎಲ್ಲಾ ರೀತಿಯ ಸಹಕಾರ ಸಿಗುತ್ತಿದೆ’ ಎಂದು ಲಿಂಗರಾಜು ಹೇಳಿದರು.

ಲಿಂಗರಾಜು ಅವರಿಗೆ ಮೊಟ್ಟೆ, ಹಾಲು, ಬಾಳೆಹಣ್ಣು ಸೇರಿದಂತೆ ಪೌಷ್ಟಿಕ ಆಹಾರದ ಜತೆಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಅವರ ತರಬೇತುದಾರ ವೈ.ಡಿ. ಮಲ್ಲಿಕಾರ್ಜುನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.