ಹೊಸಪೇಟೆ: ‘ಭಾನುವಾರ (ಏ.26) ಬಸವ ಜಯಂತಿಯನ್ನು ವೀರಶೈವ ಲಿಂಗಾಯತರು ಮನೆಗಳಲ್ಲೇ ಆಚರಿಸಬೇಕು’ ಎಂದು ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಮನವಿ ಮಾಡಿದ್ದಾರೆ.
‘ಕೊರೊನಾ ಸೋಂಕು ಹರಡದಂತೆ ಲಾಕ್ಡೌನ್ ಘೋಷಿಸಿರುವ ಕಾರಣ ಈ ಸಲ ಬಸವೇಶ್ವರ ಬಡಾವಣೆಯ ಬಸವ ಪಾರ್ಕ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಮಠದಲ್ಲೂ ಯಾವುದೇ ರೀತಿಯ ಸಭೆ, ಸಮಾರಂಭ, ಪ್ರವಚನ ಜರುಗುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಪ್ರತಿಯೊಬ್ಬರೂ ಅವರವರ ಮನೆಗಳಲ್ಲೇ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಮಠದಲ್ಲೂ ಇದೇ ರೀತಿ ಸರಳವಾಗಿ ಜಯಂತಿ ಆಚರಿಸಲಾಗುವುದು. ಸರ್ಕಾರ ಜಾರಿಗೆ ತಂದಿರುವ ಲಾಕ್ಡೌನ್ ಅನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಶರಣು ಸ್ವಾಮಿ, ಕಾರ್ಯದರ್ಶಿ ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವ ಬಳಗ, ಅಕ್ಕನ ಬಳಗ ಸೇರಿದಂತೆ ಇತರೆ ಲಿಂಗಾಯತ ಸಂಘಟನೆಗಳು ಕೂಡ ಸರಳವಾಗಿ ಬಸವ ಜಯಂತಿ ಆಚರಿಸಬೇಕೆಂದು ಕೋರಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.