ADVERTISEMENT

ಕೂಡ್ಲಿಗಿ: ಉಜ್ಜನಿ ಶಿಖರಕ್ಕೆ ಜರಿಮಲೆ ದೊರೆಗಳ ತೈಲ

ಗ್ರಾಮದಿಂದ ತೈಲ ಕುಂಭಹೊತ್ತು ಭಕ್ತರಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:22 IST
Last Updated 3 ಮೇ 2025, 13:22 IST
ಕೊಟ್ಟೂರು ತಾಲ್ಲೂಕಿನ ಉಜ್ಜನಿ ಸದ್ಧರ್ಮ ಪೀಠದ ಮರಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಎರೆಯುವ ತೈಲವನ್ನು ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ದೊರೆಗಳು ಶನಿವಾರ ಬೆಳಿಗ್ಗೆ ಗ್ರಾಮದಿಂದ ಕಳಿಸಿಕೊಟ್ಟರು
ಕೊಟ್ಟೂರು ತಾಲ್ಲೂಕಿನ ಉಜ್ಜನಿ ಸದ್ಧರ್ಮ ಪೀಠದ ಮರಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಎರೆಯುವ ತೈಲವನ್ನು ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ದೊರೆಗಳು ಶನಿವಾರ ಬೆಳಿಗ್ಗೆ ಗ್ರಾಮದಿಂದ ಕಳಿಸಿಕೊಟ್ಟರು   

ಕೂಡ್ಲಿಗಿ: ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಪೀಠದ ಮರಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಎರೆಯುವ ತೈಲವನ್ನು ತಾಲ್ಲೂಕಿನ ಜರಿಮಲೆ ದೊರೆಗಳು ಶನಿವಾರ ಬೆಳಿಗ್ಗೆ ಗ್ರಾಮದಿಂದ ಕಳಿಸಿಕೊಟ್ಟರು.

ಪ್ರತಿವರ್ಷ ವೈಶಾಖ ಶುದ್ಧ ಪಂಚಮಿಯಂದು ಉಜ್ಜಯಿನಿಯ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ನಡೆದು, ಮರುದಿನ ಷಷ್ಠಿಯಂದು ಸ್ವಾಮಿಯ ಶಿಖರಕ್ಕೆ ತೈಲಾಭಿಷೇಕ ನಡೆಯುವುದು. ಈ ತೈಲಾಭಿಷೇಕಕ್ಕೆ ಜರಿಮಲೆ ದೊರೆಗಳು ಕಳಿಸುವ ತೈಲವನ್ನು ಮೊದಲು ಎರೆದ ನಂತರವೇ ಉಳಿದ ಭಕ್ತರು ತಂದ ತೈಲವನ್ನು ಶಿಖರಕ್ಕೆ ಎರೆಯುವುದು ನಡೆದುಕೊಂಡು ಬಂದ ಸಂಪ್ರಾದಯ.

ಇದಕ್ಕಾಗಿ ಜರಿಮಲೆ ದೊರೆಗಳು ತಮ್ಮ ಮನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಕುಂಬಕ್ಕೆ ಎಳ್ಳೆಣ್ಣೆ ತುಂಬಿಸಿ ಹೂವಿನ ಅಲಂಕಾರ ಮಾಡಿ ಶುಕ್ರವಾರ ರಾತ್ರಿಯೇ ಪೂಜೆ ಮಾಡಿದ್ದರು. ನಂತರ ಶನಿವಾರ ಬೆಳಿಗ್ಗೆ ಸಿದ್ದಪ್ಪ ನಾಯಕ ದೊರೆ, ಅವರ ಸಹೋದರ ಕೃಷ್ಣ ವರ್ಮ ರಾಜ, ಸಿದ್ದಪ್ಪ ದೊರೆ ಪುತ್ರ ಶಶಿಧರ ನಾಯಕ ಅವರು ತೈಲ ತುಂಬಿದ ಕುಂಭಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಡಿ, ಶಶಿಧರ ನಾಯಕ ಅವರು ತೈಲ ತುಂಬಿದ ಕುಂಭವನ್ನು ಮನೆಯಿಂದ ಹೊರ ತಂದು ಗ್ರಾಮದ ಕೆಲ ಭಕ್ತರಿಗೆ ನೀಡಿದರು. ಮೊರಬದ ಚಂದ್ರಶೇಖರಸ್ವಾಮಿ ಪಾಲ್ಗೊಂಡಿದ್ದರು.

ADVERTISEMENT

ನಂತರ ಕುಂಭವನ್ನು ಹೊತ್ತ ನಾಗರಾಜ, ಸಿದ್ದೇಶ, ಮಲ್ಲಯ್ಯ, ಜಂಬಣ್ಣ ಸೇರಿದಂತೆ ಅನೇಕ ಭಕ್ತರು ಪಾದ ಯಾತ್ರೆ ಮೂಲಕ ಉಜ್ಜನಿಯತ್ತ ಹೆಜ್ಜೆ ಹಾಕಿದರು.

ಹಿನ್ನಲೆ: ಈ ಹಿಂದೆ ಉಜ್ಜಿನಿ ಪೀಠಕ್ಕೂ ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ಪಾಳೇಗಾರರಿಗೂ ಉತ್ತಮ ಬಾಂಧವ್ಯವಿದ್ದು, ಒಮ್ಮೆ ಪಾಳೇಗಾರರು ತಪ್ಪಾಗಿ ನಡೆದುಕೊಂಡಾಗ, ಮಾಡಿದ ತಪ್ಪಿಗೆ ಆಗಿನ ಜಗದ್ಗುರುಗಳು ಶಾಪಕೊಟ್ಟಿದ್ದರಂತೆ. ಶಾಪ ಪರಿಹಾರಕ್ಕಾಗಿ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರಕ್ಕೆ ತಪ್ಪು ಕಾಣಿಕೆಯಾಗಿ ತೈಲ ಎರೆಯಿರಿ ಎಂದು ಆಜ್ಞೆ ಇತ್ತರಂತೆ. ಅಂದಿನಿಂದ ಇಂದಿನವರೆಗೂ ಪಾಳೇಗಾರರ ವಂಶಸ್ಥರು ಪ್ರತಿವರ್ಷ ನಡೆಯುವ ಶಿಖರ ತೈಲಾಭಿಷೇಕ ಉತ್ಸವಕ್ಕೆ ಎಣ್ಣೆಯನ್ನು ಕಳಿಸುತ್ತಾರೆ. ಆದರೆ ಜರಿಮಲೆ ದೊರೆಗಳಲ್ಲಿ ಯಾರೋಬ್ಬರು ಕೂಡ ಉಜ್ಜನಿ ಗ್ರಾಮಕ್ಕೆ ಕಾಲಿಡುವುದಿಲ್ಲ. ಜರಿಮಲೆ ಗ್ರಾಮದ ಭಕ್ತರು 25 ಕಿ.ಮೀ. ದೂರದಿಂದ ಬರಿಗಾಲಿನಿಂದ ನಡೆದು ಕುಂಭ ಹೊತ್ತು ತಂದು ದೇವಸ್ಥಾನಕ್ಕೆ ಒಪ್ಪಿಸುತ್ತಾರೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.