ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿಯಲ್ಲಿ ಹಾಲಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ಹಾಲಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 19 ಜೋಡಿಗಳು ಹಸೆಮಣೆ ಏರಿದವು.
ಸಾನ್ನಿಧ್ಯ ವಹಿಸಿದ್ದ ಮಾನಿಹಳ್ಳಿ ಮಠದ ಮಳೆಯೋಗೀಶ್ವರ ಸ್ವಾಮೀಜಿ, ‘ಇಲ್ಲಿನ ಹಾಲಸ್ವಾಮಿ ಮಠವು ಸರ್ವ ಜನಾಂಗದ ಭಾವೈಕ್ಯತೆದ ಶ್ರದ್ದಾ ಕೇಂದ್ರವಾಗಿದೆ. ಪ್ರತಿ ಜಾತ್ರೆಯಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ’ ಎಂದರು..
ಅಳವುಂಡಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, ‘ಮಠಮಾನ್ಯಗಳು ಸಂಘಟಿಸುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದೆ. ಇಂತಹ ಕಾರ್ಯಗಳಿಗೆ ಭಕ್ತರು ಒತ್ತಾಸೆಯಾಗಿ ನಿಲ್ಲಬೇಕು’ ಎಂದು ಹೇಳಿದರು.
ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲ ವೀರಭದ್ರಪ್ಪಜ್ಜ ಸ್ವಾಮೀಜಿ, ಅಭಿನವ ಹಾಲವೀರಪ್ಪ ಸ್ವಾಮೀಜಿ ಸೇರಿದಂತೆ ಮಠದ ಎಲ್ಲ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಹಲಗೇರಿ ಹಾಗೂ ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.