
ಹಗರಿಬೊಮ್ಮನಹಳ್ಳಿ: ‘ಮಠಮಾನ್ಯಗಳು ಉಚಿತವಾಗಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದು ಹಿರಿಯ ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
ತಾಲ್ಲೂಕಿನ ನಂದಿಪುರದಲ್ಲಿ ಬುಧವಾರ ಶ್ರೀಗುರು ದೊಡ್ಡಬಸವೇಶ್ವರ 42ನೇ ವರ್ಷದ ರಥೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನವ ವಧುವರರು ಪರಸ್ಪರ ಅರಿತುಕೊಂಡು ಬದುಕು ಸಾಗಿಸಬೇಕು, ಒಬ್ಬರು ಕೋಪಿಸಿಕೊಂಡಾಗ ಮತ್ತೊಬ್ಬರು ಶಾಂತರಾಗಬೇಕು ಆಗ ಸಂಸಾರ ಸುಖಮಯವಾಗಿರುತ್ತದೆ’ ಎಂದು ತಿಳಿಹೇಳಿದರು.
‘ಶ್ರೀಮಠದಿಂದ ಪಡೆದ ಗುರು ಚರಂತಾರ್ಯಶ್ರೀ ಪ್ರಶಸ್ತಿ ನಿಮ್ಮ ವಿಷ್ಣುವರ್ಧನ್ಗೆ ಸಲ್ಲುತ್ತದೆ, ಚರಂತೇಶ್ವರರ ಆಶೀರ್ವಾದದಿಂದಲೇ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ಸಾಗುತ್ತಿವೆ’ ಎಂದು ತಿಳಿಸಿದರು.
ಶಾಸಕ ಕೆ.ನೇಮರಾಜ ನಾಯ್ಕ ಅವರ ಪತ್ನಿ ವಾಣಿ ನೇಮರಾಜನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. 29ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ನಂದಿಪುರದ ಮಹೇಶ್ವರ ಸ್ವಾಮೀಜಿ, ಉತ್ತಂಗಿ ಸೋಮಶಂಕರಸ್ವಾಮೀಜಿ, ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ, ಅಭಿನವ ಚರಂತೇಶ್ವರ ಶಿವಾಚಾರ್ಯ, ಬೆಣ್ಣಿಹಳ್ಳಿಯ ಪಂಚಾಕ್ಷರಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಶಿವಲಿಂಗರುದ್ರಮುನಿಸ್ವಾಮೀಜಿ, ತೆಗ್ಗಿನಮಠದ ವರಸಾದ್ಯೋಜಾತ ಶಿವಾಚಾರ್ಯ, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಹಿರೇಮಲ್ಲನಕೇರಿಯ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ, ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಪ್ರಕಾಶ್, ಕನಕಪ್ಪ, ದೊಡ್ಡಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಬನ್ನಿಗೋಳ ವೆಂಕಣ್ಣ, ನಂದಿಪುರ ಯಮುನಪ್ಪ, ಕರಿಬಸವನಗೌಡ, ಎಚ್.ಎಂ.ಗುರುಬಸವರಾಜ, ಕೆ.ಶಾರದಾ ಮಂಜುನಾಥ ಇದ್ದರು.
ರಥೋತ್ಸವ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಜನ ಭಾಗವಹಿಸಿ, ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು.
Quote - ಆಡಂಬರದ ಮದುವೆಗಳಿಂದ ದುಂದು ವೆಚ್ಚವಾಗಿ ಪೋಷಕರು ಸಾಲಗಾರರಾಗುತ್ತಾರೆ. ಇಂಥಹ ಉಚಿತ ಸಾಮೂಹಿಕ ವಿವಾಹಗಳಿಂದ ನೂರಾರು ಕುಟುಂಬಕ್ಕೆ ಸಹಕಾರಿಯಾಗುತ್ತವೆ ಭಾರತಿ ವಿಷ್ಣುವರ್ಧನ್ ನಟಿ