ಹೊಸಪೇಟೆ (ವಿಜಯನಗರ): ಇಲ್ಲಿನ ಟಿ.ಬಿ. ಡ್ಯಾಂ ಮುರುಗನ್ ದೇವಸ್ಥಾನದ ಅಡಿಕೀರ್ತಿಕೆ ವಾರ್ಷಿಕೋತ್ಸವ ನಿಮಿತ್ತ ಭಕ್ತರು ದೇಹಕ್ಕೆ ಅಲಗು ಚುಚ್ಚಿಕೊಂಡು ಸೋಮವಾರ ಹರಕೆ ತೀರಿಸಿದರು.
ಭಕ್ತರು ತುಂಗಭದ್ರಾ ನದಿಯಲ್ಲಿ ಮಿಂದೆದ್ದ ನಂತರ ಅಲ್ಲಿಂದ ದೇವಸ್ಥಾನದ ವರೆಗೆ ಹರಕೆ ತೀರಿಸುತ್ತ ಬರುತ್ತಾರೆ. ಬೆನ್ನು, ಕೈಗಳಿಗೆ ಅಲಗು ಚುಚ್ಚಿಕೊಂಡು ಬರುತ್ತಾರೆ. ಮತ್ತೆ ಕೆಲವರು ಅಲಗು ಚುಚ್ಚಿಕೊಂಡು, ಕ್ರೇನ್ಗೆ ಜೋತು ಬಿದ್ದು ದೇಗುಲದ ವರೆಗೆ ಬರುತ್ತಾರೆ.
ಇದಕ್ಕೂ ಮುನ್ನ ದೇವರಿಗೆ ವಿನಾಯಕ ಅಲಂಕಾರ, ರಥೋಟ, ಸುಂದರ ಪಳಿನಿ ಬೆಟ್ಟದ ಅಲಂಕಾರ ಮಾಡಿ, ರಥದಲ್ಲಿ ಕೂರಿಸುತ್ತಾರೆ.
‘ರಾಕ್ಷಸರು, ಋಷಿ–ಮುನಿಗಳನ್ನು ಬಂಧಿಸಿ, ಅವರಿಗೆ ಇನ್ನಿಲ್ಲದ ಹಿಂಸೆ ಕೊಡುತ್ತಾರೆ. ಇತರೆ ಋಷಿಗಳೆಲ್ಲ ಮುರುಗನ್ ಸ್ವಾಮಿಯನ್ನು ಕಂಡು, ರಾಕ್ಷಸರಿಂದ ಮುಕ್ತಿ ದೊರಕಿಸಿಕೊಡಲು ಪ್ರಾರ್ಥಿಸುತ್ತಾರೆ. ಅವರ ಕೋರಿಕೆ ಮನ್ನಿಸಿ, ರಾಕ್ಷಸರಿಂದ ಮುರುಗನ್ ಸ್ವಾಮಿ ಮುಕ್ತಿ ಕೊಡಿಸುತ್ತಾರೆ. ಅದರ ನೆನಪಿನ ಪ್ರಯುಕ್ತ ಪ್ರತಿವರ್ಷ ಸ್ವಾಮಿಯನ್ನು ನೆನಪಿಸಲಾಗುತ್ತದೆ’ ಎನ್ನುತ್ತಾರೆ ದೇವಸ್ಥಾನದ ಪ್ರಮುಖರಲ್ಲಿ ಒಬ್ಬರಾದ ಲಕ್ಷ್ಮಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.