ADVERTISEMENT

ತುಂಬಿ ಹರಿದ ನಾರಿಹಳ್ಳ: ಜಲಾವೃತವಾದ ವಿವಿಧ ಬೆಳೆಗಳು

ರೈತರಿಗೆ ತಕ್ಷಣ ಬೆಳ ನಷ್ಟ ಪರಿಹಾರ ಮಂಜೂರು ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 20:36 IST
Last Updated 6 ಆಗಸ್ಟ್ 2025, 20:36 IST
ಸಂಡೂರಿನ ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಬುಧವಾರ ಹಳ್ಳಕ್ಕೆ ಹರಿಬಿಟ್ಟಿದ್ದರಿಂದ ಕುರೆಕುಪ್ಪ ಪಟ್ಟದ ರೈತರ ಜಮೀನುಗಳು ನೀರಿನಿಂದ ಜಲಾವೃತವಾಗಿವೆ
ಸಂಡೂರಿನ ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಬುಧವಾರ ಹಳ್ಳಕ್ಕೆ ಹರಿಬಿಟ್ಟಿದ್ದರಿಂದ ಕುರೆಕುಪ್ಪ ಪಟ್ಟದ ರೈತರ ಜಮೀನುಗಳು ನೀರಿನಿಂದ ಜಲಾವೃತವಾಗಿವೆ   

ಸಂಡೂರು: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆ ಸುರಿದಿದ್ದರಿಂದ ನಾರಿಹಳ್ಳ ಜಲಾಶಯವು ಭರ್ತಿಯಾಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಬುಧವಾರ ಹಳ್ಳಕ್ಕೆ ಹೊರ ಹರಿಬಿಟ್ಟ ಪರಿಣಾಮ ಕುರೆಕುಪ್ಪ ಪಟ್ಟಣದ ರೈತರ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಕುರೆಕುಪ್ಪ ಪಟ್ಟಣದ ಹಳ್ಳದ ಬದಿಯಲ್ಲಿನ 50ಕ್ಕೂ ಹೆಚ್ಚು ಸಣ್ಣ ರೈತರ ಸುಮಾರು 180 ಎಕರೆಯ ಜಮೀನುಗಳು ನೀರಿನಲ್ಲಿ ಮುಳುಗಿವೆ. ನಾರಿಹಳ್ಳಕ್ಕೆ ಆಪಾರ ಪ್ರಮಾಣದ ನೀರು ಹರಿದುಬಂದಿದ್ದರಿಂದ ಮೆಕ್ಕೆಜೋಳ, ಹತ್ತಿ, ಭತ್ತ, ಜೋಳ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಬಡ ರೈತರು ಪರಿತಪಿಸುವಂತಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ನಾರಿಹಳ್ಳ ಜಲಾಶಯವು ಭರ್ತಿಯಾದಾಗ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಹರಿ ಬಿಡಲಾಗುತ್ತದೆ. ವಿವಿಧ ಆಹಾರ, ತೋಟಗಾರಿಕಾ ಬೆಳೆಗಳು ನೀರು ಪಾಲಾಗಿ ಸಣ್ಣ ರೈತರು ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ.

ADVERTISEMENT

‘ನಾರಿಹಳ್ಳಕ್ಕೆ ಜಲಾಶಯದಿಂದ ನೀರು ಬಿಟ್ಟಾಗ ಹಳ್ಳದ ಬದಿಯಲ್ಲಿನ ಎಲ್ಲ ಜಮೀನುಗಳು ಜಲಾವೃತವಾಗುತ್ತಿದ್ದು, ಅಧಿಕಾರಿಗಳು ಸ್ವಲ್ಪ ಪ್ರಮಾಣದ ನೀರನ್ನು ನಿರಂತರವಾಗಿ ಬಿಡಬೇಕು. ಸಂಡೂರಿನ ಶಾಸಕರು, ಅಧಿಕಾರಿಗಳು ಹಳ್ಳದ ಒತ್ತುವರಿಯನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಹಳ್ಳದ ಎರಡು ಬದಿಯಲ್ಲಿ ನೀರು ಜಮೀನುಗಳಿಗೆ ನುಗ್ಗದಂತೆ ರಕ್ಷಣಾ ಗೋಡೆಗಳನ್ನು ನಿರ್ಮಿಸಬೇಕು. ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಜಲಾವೃತ ಜಮೀನುಗಳಿಗೆ ತ್ವರಿತವಾಗಿ ಭೇಟಿ ನೀಡಿ, ಸಮೀಕ್ಷೆ ನಡೆಸಬೇಕು. ಬಡ ರೈತರಿಗೆ ತಕ್ಷಣ ಬೆಳ ನಷ್ಟ ಪರಿಹಾರ ಮಂಜೂರು ಮಾಡಲು ಸೂಕ್ತ ಕ್ರಮವಹಿಸಬೇಕು’ಎಂದು ಕುರೆಕುಪ್ಪ ಪಟ್ಟಣದ ರೈತರಾದ ಪಂಪನಗೌಡ, ಆನಂದ ಒತ್ತಾಯಿಸಿದರು.

‘ನಾರಿಹಳ್ಳದ ನೀರಿನಿಂದ ಜಲಾವೃತವಾದ ಜಮೀನುಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ತಕ್ಷಣ ಭೇಟಿ ನೀಡಿ, ವಿವಿಧ ಬೆಳೆಗಳ ಸಮೀಕ್ಷೆ ನಡೆಸಲಾಗುವುದು. ರೈತರಿಂದ ಬೆಳ ನಷ್ಟದ ಸಮಗ್ರ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತೋರಣಗಲ್ಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂತೋಷ್ ಹೇಳಿದರು.

ಸಂಡೂರಿನ ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಬುಧವಾರ ಹಳ್ಳಕ್ಕೆ ಹರಿಬಿಟ್ಟಿದ್ದರಿಂದ ಕುರೆಕುಪ್ಪ ಪಟ್ಟದ ರೈತರ ಜಮೀನುಗಳು ನೀರಿನಿಂದ ಜಲಾವೃತವಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.