ADVERTISEMENT

ಕೂಡ್ಲಿಗಿ: ಸಮಸ್ಯೆಗಳ ನೆಲೆಯಾದ ರಾಷ್ಟ್ರೀಯ ಹೆದ್ದಾರಿ

ಎ.ಎಂ.ಸೋಮಶೇಖರಯ್ಯ
Published 1 ಸೆಪ್ಟೆಂಬರ್ 2025, 6:12 IST
Last Updated 1 ಸೆಪ್ಟೆಂಬರ್ 2025, 6:12 IST
ಕೂಡ್ಲಿಗಿ ತಾಲ್ಲೂಕಿನ ಬಣವಿಕಲ್ಲು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50ರ ಕೆಳ ಸೇತುವೆಯಲ್ಲಿ ಮಳೆ ನೀರು ಸಂಗ್ರಹವಾಗುವ ಸಮಸ್ಯೆ ಇದೆ
ಕೂಡ್ಲಿಗಿ ತಾಲ್ಲೂಕಿನ ಬಣವಿಕಲ್ಲು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50ರ ಕೆಳ ಸೇತುವೆಯಲ್ಲಿ ಮಳೆ ನೀರು ಸಂಗ್ರಹವಾಗುವ ಸಮಸ್ಯೆ ಇದೆ   

ಕೂಡ್ಲಿಗಿ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು ಸಮಸ್ಯೆಗಳ ಆಗಾರವಾಗಿ ಮಾರ್ಪಟ್ಟಿವೆ!

ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ 120 ಕಿಮೀ ಉದ್ದವಿದ್ದು, ತಾಲ್ಲೂಕಿನ ಶಿವಪುರದಿಂದ ಆಲೂರುವರಗೆ 52 ಕಿಮೀನಷ್ಟು ಹಾದು ಹೋಗಿದೆ. ಕೈವಲ್ಯಾಪುರ, ಮೊರಬ, ಅಮ್ಮನಕೆರೆ, ಕ್ಯಾಸನಕೆರೆ, ಆಲೂರು-ಕಾನಮಡುಗು ಕ್ರಾಸ್‍ನಲ್ಲಿ ಮೇಲ್ಸುತುವೆ ಇಲ್ಲದೆ ರಸ್ತೆ ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಅನೇಕರು ಮೃತಪಟ್ಟಿದ್ದಾರೆ. ಇಲ್ಲಿ ಕೆಳ ಸೇತುವೆ, ಮೇಲ್ಸೆತುವೆ ನಿರ್ಮಾಣ ಮಾಡಬೇಕು ಅಥವಾ ಪರ್ಯಾಯ ಮಾರ್ಗ ಕಲ್ಪಿಸಬೇಕೆಂಬ ಜನರ ಬೇಡಿಕೆ ಇದುವರೆಗೂ ಈಡೇರಿಲ್ಲ.

ಆಲೂರು-ಕಾನಮಡುಗು ಕ್ರಾಸ್, ಜಗಳೂರು ಚಳ್ಳಕೆರೆ ಹಾಗೂ ಮೋಳಕಾಲ್ಮೂರು ತಾಲ್ಲೂಕುಗಳನ್ನು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಅತಿ ಹೆಚ್ಚು ಜನ ಹಾಗೂ ವಾಹನಗಳು ರಸ್ತೆ ದಾಟುವ ಸ್ಥಳ ಇದಾಗಿದೆ. ಇನ್ನೂ ಹನಸಿ, ಕ್ಯಾಸನಕೆರೆ, ಮೊರಬ ಹಾಗೂ ಆಡವಿಸೂರವ್ವನಹಳ್ಳಿ, ಹುಲಿಕೆರೆ ಕ್ರಾಸ್, ಬಳಿಯ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಇಲ್ಲಿ ಮೇಲ್ಸೆತುವೆ ನಿರ್ಮಾಣ ಮಾಡದೆ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ಮಾಡಿದೆ ಎಂದು ಅಲ್ಲಿನ ಜನರು ದೂರುತ್ತಿದ್ದಾರೆ.

ADVERTISEMENT

ಕೂಡ್ಲಿಗಿ ಹೊರ ವಲಯದಲ್ಲಿನ ಕರೆಕಲ್ಲು ಬಗಡಿ ಮೇಲೇ ಹೆದ್ದಾರಿ ಒಂದು ಬದಿಯಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಹಾಸ್ಟೇಲ್ ಮತ್ತೊಂದು ಬದಿಯಲ್ಲಿ ಸರ್ಕಾರಿ ಕಚೇರಿ ಹಾಗೂ ಹಾಸ್ಟೇಲ್ ಕಟ್ಟಡಗಳಿದ್ದು, ಇಲ್ಲಿ ಸ್ಕೈವಾಕ್ ನಿರ್ಮಾಣ ಮಾಡಬೇಕು ಎಂಬ ವಿದ್ಯಾರ್ಥಿಗಳು ಕೂಗು ಕೇಳುವವರಿಲ್ಲದಂತಾಗಿದ್ದು, ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿಡಿದುಕೊಂಡು ಓಡಾಡಬೇಕಾಗಿದೆ.

ಕೂಡ್ಲಿಗಿ ತಾಲ್ಲೂಕಿನ ಇಮಡಾಪುರ ಬಳಿ ಹೆದ್ದಾರಿ ಪಕ್ಕದಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ

ನೀರು ಸಂಗ್ರಹ:

ಕಾನಹೊಸಹಳ್ಳಿ ಬಳಿ ಅಂಬೇಡ್ಕರ್ ನಗರದ ಪಕ್ಕದಲ್ಲಿ ಆವೈಜ್ಞಾನಿಕವಾಗಿ ಮೇಲ್ಸುತುವೆ ನಿರ್ಮಾಣ ಮಾಡಿದ್ದರಿಂದ ಗ್ರಾಮದಿಂದ ಹೊರ ಬರುವ ನೀರು ಸರಿಯಾಗಿ ಮುಂದೆ ಹೋಗದೆ ಅಲ್ಲಿಯೇ ನಿಲ್ಲುವುದರಿಂದ ಸ್ಥಳೀಯರು ಪರದಾಡುವಂತಾಗುತ್ತದೆ. ಇದನ್ನು ಸರಿ ಪಡಿಸುವಂತೆ ಅನೇಕ ಬಾರಿ ಮನವಿ ಮಾಡಿ, ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರು ನಿಂತಾಗ ಚರಂಡಿಯನ್ನು ಸ್ವಚ್ಚ ಮಾಡಲಾಗುತ್ತದೆ. ಆದರೆ ಮಳೆ ಬಂದಾಗ ಮತ್ತದೆ ಸ್ಥಿತಿಗೆ ಮರಳುತ್ತದೆ. ಇದರಿಂದ ಅಲ್ಲಿನ ಜನರು ರೋಶಿ ಹೋಗಿದ್ದಾರೆ.

ಬಣವಿಕಲ್ಲು ಬಳಿ ಇರುವ ಕೆಳ ಸೇತುವೆಯಲ್ಲಿಯೂ ನೀರು ನಿಂತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ತುಂಬ ನೀರು ನಿಂತು ಮೂರ್ನಾಲ್ಕು ಕಾರುಗಳು ಅಪಘಾತಕ್ಕೀಡಾಗಿದ್ದವು. ಇಲ್ಲಿನ ಸೇವಾ ರಸ್ತೆಯಲ್ಲಿಯೂ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತದೆ. ಇಮಡಾಪುರದ ಮೇಲ್ಸುತುವೆ ಪಕ್ಕದಲ್ಲಿ ಅರ್ಧ ಭಾಗಕ್ಕೆ ಸೇವಾ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ. ಅನೇಕ ಕಡೆ ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಹೆದ್ದಾರಿ ದಾಟಿ ಹೋಗುವಾಗ ಸಂಕಷ್ಟಕ್ಕೆ ಸಿಲುಕುತ್ತಾರೆ.

ಈ ಹೆದ್ದಾರಿಯಲ್ಲಿ ಶಿವಪುರ ಹಾಗೂ ಜರಿಮಲೆ ಕಾದಿಟ್ಟ ಅರಣ್ಯ ಪ್ರದೇಶ ಬರುತ್ತಿದ್ದು, ಅನೇಕ ಕಾಡು ಪ್ರಾಣಿಗಳು ಸಹ ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ. ಅಲ್ಲದೆ ಹಸು, ಎಮ್ಮೆ, ಎತ್ತು ಸೇರಿದಂತೆ ಏಕಾ ಕಾಲಕ್ಕೆ ನೂರಾರು ಕುರಿ, ಮೇಕೆಗಳು ಬಾರಿ ವಾಹನಗಳಿಗೆ ಸಿಕ್ಕು ಬಲಿಯಾಗಿವೆ. ಇನ್ನಾದರೂ ಈ ವಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳು ಹೆದ್ದಾರಿಯಲ್ಲಿ ಸಮಸ್ಯೆಗಳನ್ನು ನಿವಾರಿಸಿ, ಜನ, ಜಾನುವಾರಗಳ ಜೀವ ಉಳಿಸುವುದರ ಜೊತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಯವಾಗಿದೆ.

ಡಾ. ಶ್ರೀನಿವಾಶ್ ಎನ್.ಟಿ.
ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಚರಂಡಿ ಸೇರಿದಂತೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ
ಡಾ.ಶ್ರೀನಿವಾಶ್ ಎನ್.ಟಿ. ಶಾಸಕ
ಡಿ. ವೆಂಕಟೇಶ ಕ್ಯಾಸನಕೆರೆ
ನಮ್ಮ ಗ್ರಾಮದ ಬಳಿ ಪ್ಲೈಒವರ್ ಇಲ್ಲದೆ ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿ ಅನೇಕರು ಮೃತಪಟ್ಟಿದ್ದಾರೆ. ಸೇತುವೆ ನಿರ್ಮಾಣ ಮಾಡುತ್ತಿಲ್ಲ
ಡಿ. ವೆಂಕಟೇಶ ಕ್ಯಾಸನಕೆರೆ
ಎಸ್.ಎಂ. ಮಂಜುನಾಥ
ಅಂಬೇಡ್ಕರ್ ನಗರದ ಪಕ್ಕದಲ್ಲಿ ಹೆದ್ದಾರಿ ನಿರ್ಮಾಣವಾದಾಗಿನಿಂದ ನೀರು ನಿಲ್ಲುತ್ತಿದ್ದು ಜೀವನ ಮಾಡುವುದೇ ಕಷ್ಟವಾಗಿದೆ
ಎಸ್.ಎಂ. ಮಂಜುನಾಥ ಡಿಎಸ್‍ಎಸ್ ಮುಖಂಡ ಕಾನಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.