ತೆಕ್ಕಲಕೋಟೆ: ಸಮೀಪದ ಹಳೇಕೋಟೆ ಗ್ರಾಮದಲ್ಲಿ ಭಾನುವಾರ ನಡೆದ ಕಲ್ಲು ಗಣಿಗಾರಿಕೆ ಸ್ಪೋಟಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಕಾರ್ತಿಕ್ ಗ್ರಾಮದ ಕಲ್ಯಾಣಿ ಕ್ರಶರ್ಗೆ ಭೇಟಿ ಸಂದರ್ಭದಲ್ಲಿ 'ಒಂದು ಟ್ರ್ಯಾಕ್ಟರ್ ಗರ್ಚು, ಮಣ್ಣು ಮನೆಗೆ ತೆಗೆದುಕೊಂಡು ಹೋದಲ್ಲಿ ದಾಳಿ ಮಾಡುವ ನೀವು, ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಸ್ಟೋಟ ನಡೆಸಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ತರಾಟೆಗೆ ತೆಗೆದುಕೊಂಡರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ಕಲ್ಲುಗಣಿಗಾರಿಕೆ ಸ್ಥಗಿತಕ್ಕೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥ ತಿಮ್ಮಪ್ಪ ಮಾತನಾಡಿ, ಗಣಿಗಾರಿಕೆಯ ಸ್ಪೋಟದಿಂದ ಮನೆಗಳು ಬಿರುಕು ಬಿಟ್ಟಿವೆ, ರಾಸಾಯನಿಕ ಹೆಚ್ಚು ಬಳಸುವುದರಿಂದ ಶ್ವಾಸಕೋಶ ಸಂಬಂಧಿ ರೋಗಗಳು ಬರುತ್ತಿದ್ದು, ಕಲ್ಲಿನ ಕ್ವಾರೆಗಳನ್ನು ಶಾಶ್ವತ ಬಂದ್ ಮಾಡಿಸಿ ಸಾರ್' ಎಂದು ಅಲವತ್ತುಕೊಂಡರು.
ಕಲ್ಲಿನ ಕ್ವಾರೆ ಸ್ಟೋಟದ ತೀವ್ರತೆ ಹೆಚ್ಚಿದ್ದರಿಂದ ಗ್ರಾಮಸ್ಥರಿಂದ ದೂರು ಬಂದಿದ್ದು ಪರಿಶೀಲನೆ ನಡೆಸಲಾಗಿದೆ. ಎಫ್ ಐಆರ್ ದಾಖಲಿಸಿ ಕಲ್ಯಾಣಿ ಕ್ರಶರ್ ಪರವಾನಗಿ ರದ್ದತಿಗೆ ವರದಿ ಸಲ್ಲಿಸುತ್ತೇವೆ ಎಂದು ರಂಜಿತ್ ಬಂಡಾರು ಹೇಳಿದರು.
ಬೆಳಿಗ್ಗೆ ಶ್ರೀವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಸೇರಿದಂತೆ ಗ್ರಾಮಸ್ಥರು ಸಭೆ ನಡೆಸಿ ಗ್ರಾಮದ ಸುತ್ತ ನಡೆಯುತ್ತಿರುವ 8 ಕಲ್ಲಿನ ಕಲ್ಲಿನ ಕ್ವಾರೆ ಗಣಿಗಾರಿಕೆಗೆ ವಿದ್ಯುತ್ ಸಂಪರ್ಕ ಕಡಿತ ಹಾಗೂ ಪರವಾನಗಿ ರದ್ದತಿಗಾಗಿ ಆಯಾ ಇಲಾಖೆಗಳಿಗೆ ಮನವಿ ಸಲ್ಲಿಸುವ ಠರಾವು ಪಾಸು ಮಾಡಿದರು. ಈ ಸಂದರ್ಭದಲ್ಲಿ ತೆಕ್ಕಲಕೋಟೆ ಕಂದಾಯ ನಿರೀಕ್ಷಕ ಸುರೇಶ್ ಬಾಬು, ಹಳೇಕೋಟೆ ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್, ಪಿಡಿಒ ಬಸವರಾಜ ಇದ್ದರು.
ಪರಿಶೀಲನೆ ವೇಳೆ ಸಿರುಗುಪ್ಪ ಡಿವೈಎಸ್ ಪಿ. ವೆಂಕಟೇಶ, ತೆಕ್ಕಲಕೋಟೆ ಸಿಪಿಐ ಸುಂದರೇಶ್ ಎಚ್, ಪಿ ಎಸ್ ಐ ಶಾಂತಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಕಲ್ಲಿನ ಕ್ವಾರೆ ಸ್ಟೋಟದ ತೀವ್ರತೆ ಹೆಚ್ಚಿದ್ದರಿಂದ ಗ್ರಾಮಸ್ಥರಿಂದ ದೂರು ಬಂದಿದ್ದು ಪರಿಶೀಲನೆ ನಡೆಸಲಾಗಿದೆ. ಎಫ್ ಐಆರ್ ದಾಖಲಿಸಿ ಕಲ್ಯಾಣಿ ಕ್ರಶರ್ ಪರವಾನಗಿ ರದ್ದತಿಗೆ ವರದಿ ಸಲ್ಲಿಸುತ್ತೇವೆ
-ರಂಜಿತ್ ಬಂಡಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳ್ಳಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.