ಹೊಸಪೇಟೆ (ವಿಜಯನಗರ): ಓಣಂ ಹಬ್ಬವನ್ನು ಮಲಯಾಳಂ ಭಾಷಿಕರು ಭಾನುವಾರ ನಗರದ ಟಿ.ಬಿ. ಡ್ಯಾಂ ರಸ್ತೆಯ ಎಂ.ಎಸ್. ತಿರುಮಲೈ ಐಯ್ಯಂಗಾರ್ ಹಾಲ್ನಲ್ಲಿ ಸಡಗರ, ಸಂಭ್ರಮದಿಂದ ಆಚರಿಸಿದರು.
ಪುರುಷರು ಶ್ವೇತ ವರ್ಣದ ಪಂಚೆ, ಅಂಗಿ ಧರಿಸಿದರೆ, ಮಹಿಳೆಯರು ಸೀರೆ ತೊಟ್ಟು ಗಮನ ಸೆಳೆದರು. ಹಗ್ಗ ಜಗ್ಗಾಟ ಸೇರಿದಂತೆ ಇತರೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೂವಿನಿಂದ ರಂಗೋಲಿ ಬಿಡಿಸಲಾಗಿತ್ತು. ಕೇರಳದ ಸಾಂಪ್ರದಾಯಿಕ ಭಕ್ಷ್ಯಗಳನ್ನು ಉಣಬಡಿಸಲಾಗಿತ್ತು.
‘ಕೈರಲಿ ಕಲ್ಚರಲ್ ಅಸೋಸಿಯೇಶನ್’ನಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಓಣಂ ವಿಶಿಷ್ಟ ಹಬ್ಬವಾಗಿದ್ದು, ಎಲ್ಲರೂ ಒಂದೇ ಕಡೆ ಸೇರಿ ಆಚರಿಸುತ್ತಿರುವುದು ನೋಡಿ ಖುಷಿಯಾಗಿದೆ ಎಂದರು.
ಕೇರಳದ ಕಣ್ಣೂರಿನ ಅನುವಾದಕ ಸುಧಾಕರನ್ ರಾಮಂತಳಿ ಅವರಿಗೆ ಪ್ರಸಕ್ತ ಸಾಲಿನ ‘ಕಣ್ಮಾಲಾ ಕಣ್ಮಣಿ’ ಪ್ರಶಸ್ತಿ, ₹10 ಸಾವಿರ ನಗದು ನೀಡಿ ಸಚಿವರು ಗೌರವಿಸಿದರು. ಅಸೋಸಿಯೇಶನ್ ಅಧ್ಯಕ್ಷ ಎಂ.ಕೆ. ಮಥಾಯ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ. ಮೋಹನ್ ಕುಂಟಾರ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಿ. ಸುಂದರನ್, ಕಾರ್ಯದರ್ಶಿ ಮನೋಹರ್ ಪಿಲ್ಲೈ, ಕಾರ್ಯಕಾರಿ ಸಮಿತಿ ಸದಸ್ಯ ದೇವದಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.