ಹೊಸಪೇಟೆ: ಅನುಮತಿಯಿಲ್ಲದೆ ತಾಲ್ಲೂಕಿನ ಜಂಬುನಾಥಹಳ್ಳಿಯಲ್ಲಿ ಸರ್ವೇಗೆ ಮುಂದಾಗಿರುವ ಕ್ರಮವನ್ನು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ವಿರೋಧಿಸಿದೆ.
ಈ ಕುರಿತು ಸಮಿತಿಯ ಪದಾಧಿಕಾರಿಗಳು ಗುರುವಾರ ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
‘ಜಂಬುನಾಥಹಳ್ಳಿಯ ಸರ್ವೇ ನಂ. 281/ಸಿ2, 322ಬಿ, 323, 325, 325(ಎಂ2), 325(ಕೆ2), 325(ಎನ್2) ಸೇರಿದಂತೆ ಒಟ್ಟು 51.13 ಎಕರೆ ಜಮೀನಿನ ಸರ್ವೇ ನಡೆಸಿ, ಮರು ವಿನ್ಯಾಸಗೊಳಿಸಲಾಗುತ್ತಿದೆ. ಅದಕ್ಕೆ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರದೇ ಈ ಕೆಲಸ ನಡೆಸಲಾಗುತ್ತಿದ್ದು, ಅದನ್ನು ಕೂಡಲೇ ತಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ಜಮೀನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಗೆ ಸೇರಿದೆ. ಆದರೆ, ಕೆಲವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಮೀನು ಅತಿಕ್ರಮಣಕ್ಕೆ ಮುಂದಾಗಿದ್ದಾರೆ. ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಪಿ. ವೆಂಕಟೇಶ, ಉಪಾಧ್ಯಕ್ಷ ಗುಜ್ಜಲ ಗಣೇಶ, ಪ್ರಧಾನ ಕಾರ್ಯದರ್ಶಿ ದಾದಾ ಕಲಂದರ್, ಸಹ ಕಾರ್ಯದರ್ಶಿ ಎಸ್. ವಿರೂಪಾಕ್ಷ, ಖಜಾಂಚಿ ಬಿ. ರಜಾಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.