ಕಂಪ್ಲಿ: ‘ಶ್ರಮ, ಖರ್ಚು ಕಡಿಮೆ ಮತ್ತು ಹೆಚ್ಚು ಆದಾಯದ ವಾಣಿಜ್ಯ ಕೃಷಿಯಾದ ತಾಳೆ ಬೆಳೆ ಕೃಷಿಯತ್ತ ಗಮನಹರಿಸುವಂತೆ’ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ. ಶಂಕರ್ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ನಂ.3 ಸಣಾಪುರ ಗ್ರಾಮದ ತಾಳೆ ಬೆಳೆಗಾರರಾದ ಹನುಮಂತರಾವ್, ರಘುರಾಮ್ ಅವರ ತೋಟದಲ್ಲಿ, ತೋಟಗಾರಿಕೆ ಇಲಾಖೆ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಳೆ ಬೆಳೆ ಯೋಜನೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಾಳೆ ಬೆಳೆಗೆ ಇಲಾಖೆಯಿಂದ ಸೂಕ್ತ ಪ್ರೋತ್ಸಾಹ ನೀಡುತ್ತಿರುವುದರಿಂದ ಸದುಪಯೋಗಪಡೆಯುವಂತೆ’ ತಿಳಿಸಿದರು.
ಖಾದ್ಯತೈಲ ಸ್ವಾವಲಂಬನೆ ಸಾಧಿಸಲು ತಾಲ್ಲೂಕಿನ ರೈತರು ತಾಳೆ ಬೆಳೆ ಬೆಳೆಯುವಲ್ಲಿ ಆಸಕ್ತಿ ತೋರಬೇಕು. ಸದ್ಯ ತಾಲ್ಲೂಕಿನ 45 ಹೆಕ್ಟೇರ್ ಸೇರಿ ಜಿಲ್ಲೆಯಾದ್ಯಂತ 500 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ ಎಂದು ವಿವರಿಸಿದರು.
ಮೆಣಸಿನಕಾಯಿ ಬೆಳೆ ವಿಮೆ ಅಳವಡಿಸಿಕೊಳ್ಳಲು ಜುಲೈ 31ರೊಳಗೆ ಹೆಕ್ಟೇರ್ ಗೆ ₹ 5,375 ವಿಮಾ ಮೊತ್ತ ಪಾವತಿಸುವಂತೆ ತೋಟಗಾರಿಕೆ ರೈತರಿಗೆ ಮಾಹಿತಿ ನೀಡಿದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎಸ್.ರವಿ ತಾಳೆ ಬೆಳೆ ಕುರಿತು ಸಮಗ್ರ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಸಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ರಮಣಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವ್ಯವಸ್ಥಾಪಕ ಎಸ್. ಹಿರೇಮಠ, ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಟಿ.ಸುನೀಲ್ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟರಾಮರಾಜು, ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.