ಬಳ್ಳಾರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ನಗರ ಸೇರಿ ಜಿಲ್ಲೆಯಾದ್ಯಂತ ಜನರುಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಿದರು.
ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ಧರಿಸಿ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಕೊಬ್ಬರಿ ಬಟ್ಟಲಿನಲ್ಲಿ ಹಾಲು ಎರೆದರು. ನಗರದ ಕಪ್ಪಗಲ್ಲು ರಸ್ತೆ ವೀರಬ್ರಹ್ಮಮ್ಮಗಾರಿ ಮಠ, ರಾಮಾಂಜನೇಯ ನಗರದ ರಾಮಾಂಜನೇಯ ದೇವಸ್ಥಾನ, ಬಾಲಾಂಜನೇಯ ಗುಡಿ, ಬೆಳಗಲ್ ರಸ್ತೆ, ಮಿಲ್ಲರೆ ಪೇಟೆ, ಸತ್ಯನಾರಾಯಣಪೇಟೆ, ಬನ್ನಪ್ಪ ಬೀದಿ, ವೀರಭದ್ರಯ್ಯ, ಸಂಗಮೇಶ್ವರ, ಆದಿಲಿಂಗೇಶ್ವರ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಮಲ್ಲೇಶ್ವರ ಗುಡಿ ಸೇರಿ ನಗರದ ವಿವಿಧ ದೇವಸ್ಥಾನಗಳಲ್ಲಿ ಇರುವ ನಾಗಮೂರ್ತಿಗಳಿಗೆ ಬೆಳಿಗ್ಗೆಯಿಂದಲೇ ತೆರಳಿ ಹೂವು, ಹಣ್ಣು, ಕಾಯಿಯೊಂದಿಗೆ ಪೂಜೆ ಸಲ್ಲಿಸಿ, ಕೊನ್ನರಿ ಬಟ್ಟಲಿನಲ್ಲಿ ಹಾಲು ಎರೆದು ಭಕ್ತಿ ಸಮರ್ಪಿಸಿದರು.
ಬೆಳಿಗ್ಗೆಯಿಂದ ಮಹಿಳೆಯರು, ಮಕ್ಕಳು, ಕುಟುಂಬಗಳ ಸಮೇತ ನಾಗರ ಪಂಚಮಿ ಪ್ರಯುಕ್ತ ದೇವಸ್ಥಾನಗಳತ್ತ ಬರುತ್ತಿದ್ದರು. ಆದ್ದರಿಂದ ದೇವಸ್ಥಾನಗಳು ಜನನಿಬೀಡಪ್ರದೇಶಗಳಾಗಿದ್ದವು. ಎಲ್ಲರೂ ಸಾಲಾಗಿ ನಿಂತು ಹುತ್ತಕ್ಕೆ ಮತ್ತು ಕಲ್ಲಿನ ನಾಗರಕ್ಕೆ ಹಾಲೆರೆಯುವ ಮೂಲಕ ಭಕ್ತಿ ಮೆರೆದರು.
ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹುತ್ತ, ನಾಗಮೂರ್ತಿಗಳಿಗೆ ಹಾಲೆರೆದು ಸಂಭ್ರಮಿಸಿದರು.ಯುವಕರು ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರೆ, ಯುವತಿಯರು ಜೋಕಾಲಿ ಆಡಿ ಹಬ್ಬಕ್ಕೆ ಮೆರುಗು ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.