ADVERTISEMENT

ಯುವತಿ ಕೊಲೆ ಪ್ರಕರಣದಲ್ಲಿ ಪೋಷಕರ ಬಂಧನ

ಆರೋಪಿ ಮಗನಿಗೆ ಸಹಕಾರ ನೀಡಿದ ತಂದೆ: ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 2:55 IST
Last Updated 1 ಆಗಸ್ಟ್ 2022, 2:55 IST
   

ಕಾನಹೊಸಹಳ್ಳಿ: ಸಮೀಪದ ಕನ್ನಿಬೋರಯ್ಯನಹಟ್ಟಿಯಲ್ಲಿ ಜುಲೈ 21ರಂದು ನಡೆದಿದ್ದ ನಿರ್ಮಲಾ ಎಂಬ ಯುವತಿಯ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯ ಪೋಷಕರನ್ನು ಕಾನಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಹತ್ಯೆ ನಡೆದ ದಿನ ಆರೋಪಿಯ ಕುಟುಂಬದವರು ತಲೆ ಮರೆಸಿಕೊಂಡಿದ್ದರು, ಆಂಧ್ರಪ್ರದೇಶದ ಹಿರಾಳ್ ಬಳಿ ಅವರನ್ನು ಬಂಧಿಸಲಾಗಿದೆ. ಯುವತಿಯ ಹತ್ಯೆಗೈದು ಶರಣಾಗಿದ್ದ ಆರೋಪಿ ಬೋಜರಾಜನ ತಂದೆ ಬಸಣ್ಣ ಅವರನ್ನು ಕೊಲೆಗೆ ಸಹಕಾರ ನೀಡಿದ ಆರೋಪದಡಿ ಹಾಗೂ ಬೋಜರಾಜನಿಗೆ ಅಪ್ರಾಪ್ತ ಬಾಲಕಿಯ ಜತೆ ಮದುವೆ ಮಾಡಿಸಿದ್ದ ಆರೋಪದಡಿ ಬಾಲ್ಯವಿವಾಹ ಪ್ರಕರಣದಲ್ಲಿ ತಾಯಿ ಕರಿಬಸಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಜುಲೈ 21ರಂದು ಕನ್ನಿಬೋರಯ್ಯನಹಟ್ಟಿಯಲ್ಲಿ ನಿರ್ಮಲಾ ಎಂಬ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಬೋಜರಾಜ ಎಂಬಾತ ಏಕಾಏಕಿ ಮನೆಗೆ ನುಗ್ಗಿ ಯುವತಿಯ ತಲೆ ಕತ್ತರಿಸಿ, ಬೈಕ್ ನ ಬ್ಯಾಗ್ ನಲ್ಲಿಟ್ಟುಕೊಂಡು ಕಾನಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಆರೋಪಿ ಬೋಜರಾಜನ ವಿರುದ್ಧ ಅಪ್ರಾಪ್ತ ವಯಸ್ಸಿನ ಆತನ ಪತ್ನಿ ಹೇಳಿಕೆ ಅನ್ವಯ ಪೊಕ್ಸೊ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಾಗಿತ್ತು, ಆರೋಪಿಯ ಪೋಷಕರು ಹಾಗೂ ಆರೋಪಿ ಸಹೋದರನ ವಿರುದ್ಧವೂ ಪ್ರಕರಣ ದಾಖಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.