ADVERTISEMENT

ಪ್ಯಾಸೆಂಜರ್‌ ರೈಲಿನ ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 13:07 IST
Last Updated 4 ಸೆಪ್ಟೆಂಬರ್ 2019, 13:07 IST

ಹೊಸಪೇಟೆ: ಸೆ. 15ರಂದು ನಗರದಿಂದ ಕೊಟ್ಟೂರು ಮಾರ್ಗವಾಗಿ ಹರಿಹರಕ್ಕೆ ಓಡಿಸಲು ಉದ್ದೇಶಿಸಿರುವ ಪ್ರಯಾಣಿಕರ ರೈಲು (ಗಾಡಿ ಸಂಖ್ಯೆ 56523/56530) ಸಂಚಾರದ ಸಮಯವನ್ನು ನೈರುತ್ಯ ರೈಲ್ವೆ ಇಲಾಖೆ ಪ್ರಕಟಿಸಿದೆ.

ಈ ರೈಲು ಬೆಳಿಗ್ಗೆ 7.20ಕ್ಕೆ ಹರಿಹರದಿಂದ ಪಯಣ ಬೆಳೆಸಿ, ಅಮರಾವತಿ ಕಾಲೊನಿ, ದಾವಣಗೆರೆ, ತೆಲಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲ್ವಿ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣ, ಮರಿಯಮ್ಮನಹಳ್ಳಿ, ವ್ಯಾಸನಕೆರೆ, ತುಂಗಭದ್ರಾ ಡ್ಯಾಂ ನಿಲ್ದಾಣದ ಮೂಲಕ ಬೆಳಿಗ್ಗೆ 11.45ಕ್ಕೆ ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಅರ್ಧ ಗಂಟೆ ನಿಲುಗಡೆಯ ಬಳಿಕ ಅದೇ ಮಾರ್ಗದಲ್ಲಿ ಪುನಃ ದಾವಣಗೆರೆಗೆ ಪ್ರಯಾಣ ಬೆಳೆಸಲಿದೆ.

ಅರಸೀಕೆರೆಗೆ ವಿಸ್ತರಿಸಿ:‘ಈ ರೈಲನ್ನು ಬರುವ ದಿನಗಳಲ್ಲಿ ಅರಸೀಕೆರೆ ಜಂಕ್ಷನ್‌ ವರೆಗೆ ವಿಸ್ತರಿಸಬೇಕು. ಇದರಿಂದಾಗಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಹಾಸನ ನಗರಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಪ್ರವಾಸಿ, ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬೇಲೂರು, ಹಳೇಬಿಡು ಮುಂತಾದ ಕಡೆ ಜನರಿಗೆ ಹೋಗಿ ಬರಲು ಅನುಕೂಲವಾಗುತ್ತದೆ’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೈ. ಯಮುನೇಶ್‌ ಸಂಸದ ವೈ. ದೇವೇಂದ್ರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ರೈಲ್ವೆ ಸುರಕ್ಷತಾ ಆಯುಕ್ತರು ಇನ್ನಷ್ಟೇ ಪರಿಶೀಲನೆ ನಡೆಸಿ, ಅಧಿಕೃತವಾಗಿ ರೈಲು ಸಂಚಾರದ ಉದ್ಘಾಟನೆಯ ದಿನಾಂಕ ನಿಗದಿಪಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.