ADVERTISEMENT

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ತೀರ್ಪು ಪ್ರಕಟ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 14:04 IST
Last Updated 10 ಡಿಸೆಂಬರ್ 2018, 14:04 IST

ತೋರಣಗಲ್ಲು: ಇಲ್ಲಿಗೆ ಸಮೀಪದ ಕುಡಿತಿನಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಧಾರವಾಡ ಹೈಕೋರ್ಟ್ ಪೀಠ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಅಂತಿಮ ತೀರ್ಪನ್ನು ಸೋಮವಾರ ಪ್ರಕಟಿಸಿದೆ.

ರಾಜ್ಯ ಸರ್ಕಾರ ಕಳೆದ ಸೆ.3ರಂದು ಪ್ರಕಟಿಸಿದ್ದ ಹೊಸ ಮೀಸಲಾತಿಯನ್ನು ಆರನೇ ವಾರ್ಡ್‍ನ ಬಿಜೆಪಿ ಸದಸ್ಯೆ ಗೀತಾ ಅವರುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಮತ್ತೆ ವಿಚಾರಣೆಯನ್ನು ಕೈಗೆತ್ತಿಕೊಂಡ ಪೀಠ ಅರ್ಜಿದಾರರ ವಾದವನ್ನು ಖುಲಾಸೆ ಗೊಳಿಸಿ ರಾಜ್ಯ ಸರ್ಕಾರದ ಹೊರಡಿಸಿದ ಹೊಸ ಮೀಸಲಾತಿಯನ್ನು ಎತ್ತಿ ಹಿಡಿದಿದೆ.

ಪೌರಾಡಳಿತ ಸಚಿವಾಲಯ 2016 ರಲ್ಲಿ ಪ್ರಕಟಿಸಿದ್ದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿತ್ತು. ಆದರೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಸರ್ಕಾರ ಮೀಸಲಾತಿಯಲ್ಲಿ ಬದಲಾವಣೆ ಮಾಡಿತ್ತು.ಪಟ್ಟಣ ಪಂಚಾಯ್ತಿಯ ಒಟ್ಟು 19 ಸ್ಥಾನಗಳಲ್ಲಿ ಕಾಂಗ್ರೆಸ್11, ಬಿಜೆಪಿ 8 ಸ್ಥಾನ ಪಡೆದಿದ್ದು, ಜೆಡಿಎಸ್ ಖಾತೆ ತೆರೆದಿಲ್ಲ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಸದಸ್ಯೆ ಗೀತಾ ಅವರು, ಏಕ ಸದಸ್ಯ ಪೀಠದಲ್ಲಿ ಅರ್ಜಿ ತಿರಸ್ಕೃತಗೊಂಡಿದ್ದರೂ, ಮುಂದಿನ ದಿನಗಳಲ್ಲಿ ದ್ವಿ-ಸದಸ್ಯ ಪೀಠದಲ್ಲಿ ಮೇಲ್ಮವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.