ಹೊಸಪೇಟೆ: ತಾಲ್ಲೂಕಿನ ಹಂಪಿ ಸಾಲುಮಂಟಪದಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನು ಕೊನೆಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಶುಕ್ರವಾರ ತೆರವುಗೊಳಿಸಿದೆ.
‘ಸಾಲು ಮಂಟಪ ಜೀರ್ಣೊದ್ಧಾರ ನನೆಗುದಿಗೆ’ ಶೀರ್ಷಿಕೆ ಅಡಿಯಲ್ಲಿ ಅ. 5ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಹಂಪಿ ರಥಬೀದಿಗೆ ಹೊಂದಿಕೊಂಡಿರುವ ಸಾಲು ಮಂಟಪದಲ್ಲಿ ಮಳೆ ನೀರು ನಿಂತಿದ್ದು, ಜೀರ್ಣೊದ್ಧಾರ ಸ್ಥಗಿತಗೊಂಡಿದೆ. ನೀರು ಸಂಗ್ರಹವಾಗಿರುವ ಕಾರಣ ಎಲ್ಲೆಡೆ ದುರ್ಗಂಧ ಹರಡಿತ್ತು. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
‘ಮಳೆ ನೀರು ನಿಂತಿರುವುದರಿಂದ ಡೆಂಗಿ, ಮಲೇರಿಯಾದಂತಹ ರೋಗ ಹರಡುವ ಭೀತಿ ಹೆಚ್ಚಾಗಿದೆ. ದುರ್ಗಂಧದಿಂದ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ’ ಎಂದು ಸಾರ್ವಜನಿಕರು ದೂರಿದ್ದರು.
ಕೊನೆಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಮನಗಂಡು, ಪತ್ರಿಕೆಯಲ್ಲಿ ಬಂದಿರುವ ವರದಿ ನೋಡಿ ಎ.ಎಸ್.ಐ. ಕ್ರಮ ಕೈಗೊಂಡಿರುವುದಕ್ಕೆ ಜನ ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.