ಬಳ್ಳಾರಿ / ಹಗರಿಬೊಮ್ಮನಹಳ್ಳಿ: ಇತ್ತೀಚೆಗೆ ನಡೆದ ಪುರಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಶಾಸಕ ಎಸ್.ಭೀಮಾನಾಯ್ಕ ತೋಳು ತಟ್ಟಿಕೊಂಡು ಕುಸ್ತಿಗೆ ಆಹ್ವಾನಿಸಿದ್ದನ್ನು ವಿರೋಧಿಸಿ ಬಳ್ಳಾರಿ ಮತ್ತು ಸಂಡೂರಿನಲ್ಲಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿದೆ. 11ರಂದು ಹಗರಿಬೊಮ್ಮನಹಳ್ಳಿ ಬಂದ್ಗೆ ಬಿಜೆಪಿಯ ಮಾಜಿ ಶಾಸಕ ಕೆ.ನೇಮಿರಾಜನಾಯ್ಕ ಕರೆ ಕೊಟ್ಟಿದ್ದಾರೆ.
ಇದೇ ವೇಳೆ, ಶಾಸಕ ಭೀಮಾನಾಯ್ಕ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಅವರಿಗೆ ದೂರು ಸಲ್ಲಿಸಿದ್ದು, ಚುನಾವಣೆ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ವೇಳೆ ನೇಮಿರಾಜ ನಾಯ್ಕ ಅವರ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಸಲು ಮುಂದಾದರು. ನನ್ನ ವಿರುದ್ಧ ಗಲಾಟೆಗೆ ಪ್ರಚೋದನೆ ನೀಡಿದರು. ಆಗ ನಾನು ತೋಳು ತಟ್ಟಿದ್ದು ನಿಜ. ಶಾಸಕನಾದ ನನ್ನ ಮೇಲೆ ಹಲ್ಲೆಗೆ ಬಂದರೆ ನಾನು ಸುಮ್ಮನಿರಬೇಕೆ? ಸ್ಥಳೀಯ ಪೊಲೀಸ್ ಅಧಿಕಾರಿಗಳಿದ್ದರೂ ಕ್ರಮಕ್ಕೆ ಮುಂದಾಗಲಿಲ್ಲ. ಪೊಲೀಸ್ ವ್ಯವಸ್ಥೆಯ ವೈಫಲ್ಯದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವೆ. ಕಾಂಗ್ರೆಸ್ ಮುಖಂಡರಿಗೆ ರಕ್ಷಣೆ ನೀಡಬೇಕು’ ಎಂದು ಕೋರಿರುವೆ’ ಎಂದರು.
ಶಾಸಕರು ತೋಳು ತಟ್ಟಿ ಮುಂದೆ ನುಗ್ಗುವ ದೃಶ್ಯವನ್ನು ಕನ್ನಡದ ‘ಟಗರು ಬಂತು ಟಗರು’ ಹಾಡಿಗೆ ಡಬ್ ಮಾಡಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.