ADVERTISEMENT

ಸಚಿವರ ಕಾರ್ಯಕ್ರಮಕ್ಕೆ ನುಗ್ಗಲು ಯತ್ನ: ಬಂಧನ

ಹೊಸ ಶಿಕ್ಷಣ ನೀತಿ ವಿರೋಧಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 22:02 IST
Last Updated 28 ಅಕ್ಟೋಬರ್ 2021, 22:02 IST
ಬಳ್ಳಾರಿ ಬಿಐಟಿಎಂ ಕಾಲೇಜು ಮುಂದೆ ಗುರುವಾರ ಹೊಸ ಶಿಕ್ಷಣ ನೀತಿ ವಿರುದ್ಧ ಪ್ರತಿಭಟಿಸಿದ ಸಿಎಫ್‌ಐ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ದರದರನೆ ಎಳೆದೊಯ್ದರು ಪ್ರಜಾವಾಣಿ ಚಿತ್ರ
ಬಳ್ಳಾರಿ ಬಿಐಟಿಎಂ ಕಾಲೇಜು ಮುಂದೆ ಗುರುವಾರ ಹೊಸ ಶಿಕ್ಷಣ ನೀತಿ ವಿರುದ್ಧ ಪ್ರತಿಭಟಿಸಿದ ಸಿಎಫ್‌ಐ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ದರದರನೆ ಎಳೆದೊಯ್ದರು ಪ್ರಜಾವಾಣಿ ಚಿತ್ರ   

ಬಳ್ಳಾರಿ: ಹೊಸ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ಧ ಪ್ರತಿಭಟಿಸಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ಭಾಗವಹಿಸಿದ್ದ ಕಾರ್ಯ ಕ್ರಮಕ್ಕೆ ನುಗ್ಗಲು ಯತ್ನಿಸಿದ ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ’ (ಸಿಎಫ್‌ಐ) ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಹರಸಾಹಸ ಮಾಡಿ ಬಂಧಿಸಿದರು.

ಹೊಸ ಶಿಕ್ಷಣ ನೀತಿ ಕುರಿತು ಬಳ್ಳಾರಿ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ (ಬಿಐಟಿಎಂ) ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ನುಗ್ಗಲು ವಿದ್ಯಾರ್ಥಿಗಳು ಯತ್ನಿಸಿದಾಗ ಪೊಲೀಸರು ಬಂಧಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸರು ಹರಸಾಹಸ ಮಾಡಿದರು. ಬಂಧನದಿಂದ ತಪ್ಪಿಸಿಕೊಳ್ಳಲು ನೆಲದ ಮೇಲೆ ಹೊರಳಾಡಿದ ಪ್ರತಿಭಟನಾಕಾರರನ್ನು ಹಿಡಿದು ದರದರನೆ ಎಳೆದೊಯ್ದರು.

ADVERTISEMENT

ಬಿಐಟಿಎಂ ಕಾಲೇಜಿಗೆ ‍ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಬಂದರು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಇದ್ದುದ್ದರಿಂದ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಲಾಯಿತು. ಕುಡುತಿನಿ ಮತ್ತು ಕುರುಗೋಡುಗಳಿಂದಲೂ ಅಧಿಕಾರಿಗಳು ಧಾವಿಸಿದರು.

‘ಬಂಧನದ ಸಮಯದಲ್ಲಿ ತಮ್ಮ ಮೇಲೆ ಪೊಲೀಸರು ಹಲ್ಲೆ ಮಾಡಿದರು. ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ’ ಎಂದು ವಿದ್ಯಾರ್ಥಿ ಮುಖಂಡ ಹಬೀಬ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಬಂದಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಸಿರಾಜ್‌, ‘ಎನ್‌ಇಪಿ’ ಮನುವಾದಿ ನಿಲುವನ್ನು ಪ್ರತಿಪಾದಿಸುತ್ತಿದೆ. ಇದರಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಎನ್‌ಇಪಿಯಲ್ಲಿ ಇತಿಹಾಸ ತಿರುಚಲಾಗಿದೆ. ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಮರು, ಬೌದ್ಧ ಮತ್ತು ಜೈನ ರಾಜರು ಹೆಚ್ಚಿದ್ದಾರೆ. ಈ ಕಾರಣಕ್ಕೆ ಮಧ್ಯಕಾಲೀನ ಇತಿಹಾಸ ತೆಗೆದುಹಾಕಲಾಗಿದೆ. ’ ಎಂದು ಅವರು ಟೀಕಿಸಿದರು.

‘ಎನ್‌ಇಪಿ ಮೌಢ್ಯ ಬೋಧಿಸುತ್ತದೆ. ಮೌಲ್ಯಯುತ ಶಿಕ್ಷಣಕ್ಕೆ ಇಲ್ಲಿ ಅವಕಾಶವಿಲ್ಲ. ಕೂಡಲೇ ಇದನ್ನು ಹಿಂಪಡೆಯಬೇಕು. ’ ಎಂದು ಆಗ್ರಹಿಸಿದರು. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಸಮಿತಿ ಅಧ್ಯಕ್ಷ ಸೊಹೇಲ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.