ಹೊಸಪೇಟೆ: ಹತ್ತು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ರಾಣಿಪೇಟೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
2020ರ ಏಪ್ರಿಲ್ನಿಂದ ಇದುವರೆಗೆ ವೇತನ ಪಾವತಿಸಿಲ್ಲ. ಈ ಹಿಂದಿನ ವೇತನ ಕೂಡ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಅತಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವವರ ವೇತನ ಬಾಕಿ ಉಳಿಸಿಕೊಂಡರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಆನಂದ್ ಸಿಂಗ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿನ ಇತರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ‘ಡಿ’ ಗ್ರೂಪ್ ನೌಕರರು, ಹೊರಗುತ್ತಿಗೆ ನೌಕರರ ವೇತನ ಪಾವತಿಸಲಾಗಿದೆ. ಆದರೆ, ಹಾಸ್ಟೆಲ್ನಲ್ಲಿ ಕೆಲಸ ನಿರ್ವಹಿಸುತ್ತಿರುವವರ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರೇ ಹೆಚ್ಚಾಗಿ ಹಾಸ್ಟೆಲ್ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿಧವೆಯರು, ಪುನರ್ವಸತಿ ಕಲ್ಪಿತ ದೇವದಾಸಿಯರೂ ಇದ್ದಾರೆ. ಮನೆಯ ಬಾಡಿಗೆ, ವಿದ್ಯುತ್ ಶುಲ್ಕ ಸೇರಿದಂತೆ ಇತರೆ ಖರ್ಚು ಭರಿಸಲು ಆಗುತ್ತಿಲ್ಲ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರ ವೇತನ ಪಾವತಿಸಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಸತ್ಯಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ. ರಮೇಶ್ ಕುಮಾರ್, ಮುಖಂಡರಾದ ಟಿ.ಎಚ್.ಎಂ. ಪ್ರೀತಿ, ಎಂ. ಲಕ್ಷ್ಮಿದೇವಿ, ಈ. ತಿರುಪತಿ, ಹನುಮಂತ, ಎಂ. ಸೀತಾ, ಜಯ, ಗಂಗವ್ವ, ಮಲ್ಲಮ್ಮ, ನಾಗಭೂಷಣ, ಗೀತಾ, ರುಕ್ಮಿಣಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.