ADVERTISEMENT

ಕಳಪೆ ಔಷಧ ಕೊಟ್ಟು ಬಾಣಂತಿಯರ ಕೊಂದ ಸರ್ಕಾರ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 9:30 IST
Last Updated 1 ಡಿಸೆಂಬರ್ 2024, 9:30 IST
   

ಬಳ್ಳಾರಿ: ‘ಕಳಪೆ ಗುಣಮಟ್ಟದ ಔಷಧ ನೀಡಿ ಸರ್ಕಾರವೇ ಬಾಣಂತಿಯರನ್ನು ಕೊಂದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದ್ದಾರೆ. 

ಬಾಣಂತಿಯರ ಸರಣಿ ಸಾವು ಸಂಭವಿಸದ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ‘ಪಶ್ಚಿಮ ಬಂಗಾ ಫಾರ್ಮಸ್ಯುಟಿಕಲ್‌ ’ ಕಂಪನಿಯ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ಗೊತ್ತಿದ್ದರೂ ಯಾರ ಒತ್ತಡದಲ್ಲಿ ಸರ್ಕಾರ ಅದನ್ನು ಖರೀದಿ ಮಾಡಿತು’ ಎಂದು ಪ್ರಶ್ನೆ ಮಾಡಿದರು. 

‘ರಾಜ್ಯದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟಿವೆ. ಬಳ್ಳಾರಿಯಲ್ಲಿ ನಾಲ್ವರು ಬಾಣಂತಿಯರು ಕೊನೆಯುಸಿರೆಳೆದಿದ್ದಾರೆ. ‌ಮೆಡಿಕಲ್ ಮಾಫಿಯಾದಿಂದ ಜನರಲ್ಲಿ ಆತಂಕ ಉಂಟಾಗಿದೆ. ಬಳ್ಳಾರಿಯಲ್ಲಿ ಐವಿ ದ್ರಾವಣ ನೀಡಿದ ಬಳಿಕ ಬಾಣಂತಿಯರಲ್ಲಿ ಬಹು ಅಂಗಾಂಗ ವೈಫಲ್ಯವಾಗಿದೆ. ಸರ್ಕಾರ ಖರೀದಿ ಮಾಡಿದ್ದ ಐವಿ ದ್ರಾವಣ ಔಷಧವಲ್ಲ ಬದಲಿಗೆ ಕೊಲೆ ಮಾಡುವ ರಾಸಾಯನಿಕವಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ADVERTISEMENT

‘ಪಶ್ಚಿಮ ಬಂಗಾ ಫರ್ಮಾಸ್ಯುಟಿಕಲ್‌’ ಕಂಪನಿಯ ಐವಿ ದ್ರಾವಣ ಕಳಪೆ ಗುಣಮಪಟ್ಟದ್ದು ಎಂದು ಆರು ತಿಂಗಳ ಹಿಂದೆ ಔಷಧ ನಿಯಂತ್ರಕರು ಹೇಳಿದ್ದರು. ಐವಿ ದ್ರಾವಣದ 92 ಬ್ಯಾಚ್‌ಗಳಲ್ಲಿ 23 ಬ್ಯಾಚ್ ಕಳಪೆ ಗುಣಮಟ್ಟದ್ದು ಎಂದು ಅವರು ವರದಿ ನೀಡಿದ್ದರು. ಕಳಪೆ ಗುಣಮಟ್ಟದ್ದು ಎಂದು ಗೊತ್ತಿದ್ದರೂ ಸರ್ಕಾರ ಯಾಕೆ ಖರೀದಿ ಮಾಡಿತು. ಈ ಔಷಧ ಬಳಸಲು ಅನುಮತಿ ನೀಡಿದ ಬಲಾಢ್ಯರು ಯಾರು. ಇದಕ್ಕೆ ಯಾರ ಚಿತವಣೆ ಇದೆ. ಈ ಔಷಧಿ ಕಂಪನಿಯ ಅನ್ಸಾರಿ ಎಂಬುವವರ ಸಂಚಿನಿಂದ ಔಷಧ ಒಳ ಬಂದಿದೆ. ಅನ್ಸಾರಿ ಬಂಧನವಾದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದರು. 

‘ರಾಜ್ಯ ಸರ್ಕಾರ ಕೇವಲ ₹2 ಲಕ್ಷ ಪರಿಹಾರ ನೀಡಿದೆ. ಸರ್ಕಾರಕ್ಕೆ ಬಡವರ ಜೀವದ ಬೆಲೆ ಗೊತ್ತಿಲ್ಲವೇ. ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ಕೊಡಬೇಕು’ ಎಂದೂ ಅವರು ಕೇಳಿದರು. 

‘ಬಳ್ಳಾರಿಯಲ್ಲಿ ಇಷ್ಟಾಗಿದ್ದರೂ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ  ಕಾಣೆಯಾಗಿದ್ದಾರೆ. ಯಾರೊಬ್ಬರೂ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಸರ್ಕಾರದ ಮಂತ್ರಿಗಳು ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಈ ವರ್ಷ ಇಲ್ಲಿವರೆಗೆ ಸಂಭವಿಸಿರುವ 28 ಬಾಣಂತಿಯರ ಸಾವಿನ ಕುರಿತು ಲೋಕಾಯುಕ್ತ ತನಿಖೆ ನಡೆಯಬೇಕು. ಇಲ್ಲದಿದ್ದಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನೇ ಲೋಕಾಯುಕ್ತರಿಗೆ ದೂರು ನೀಡುವೆ’ ಎಂದು ಎಚ್ಚರಿಸಿದರು. 

‘ರೈತರು, ಅಧಿಕಾರಿಗಳಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡುತ್ತಿದ್ದರೆ, ನವಜಾತ ಶಿಶುಗಳಿಗೆ ಮತ್ತು ಬಾಣಂತಿಯರಿಗೆ ಸಾವಿನ ಭಾಗ್ಯ ಕರುಣಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ, ಈಗ ಹಾಸನದಲ್ಲಿ ಸಮಾವೇಶ ಮಾಡುತ್ತಿರುವುದು ಯಾವ ಪುರಾಷರ್ಥಕ್ಕಾಗಿ. ಜನರು ಇನ್ನು ಮುಂದೆ ಎರಡು ಸಾವಿರ ರೂಪಾಯಿ ಬೇಡ, ಆರೋಗ್ಯ ಭಾಗ್ಯ ಕೊಡಿ ಎಂದು ಕೇಳುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.