ADVERTISEMENT

ಬಳ್ಳಾರಿ ನಗರದಲ್ಲಿ ರಾತ್ರಿ ಮತ್ತೆ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 1 ಮೇ 2019, 10:12 IST
Last Updated 1 ಮೇ 2019, 10:12 IST
ಬಳ್ಳಾರಿಯ ಕೌಲ್‌ಬಜಾರ್‌ ಪ್ರದೇಶದ ಮೊದಲನೇ ರೈಲು ಗೇಟ್‌ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಬಳ್ಳಾರಿಯ ಕೌಲ್‌ಬಜಾರ್‌ ಪ್ರದೇಶದ ಮೊದಲನೇ ರೈಲು ಗೇಟ್‌ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.   

ಬಳ್ಳಾರಿ: ನಗರದಲ್ಲಿ ಮತ್ತೆ ಮಂಗಳವಾರ ಮಳೆ ತನ್ನ ಕರಾಮತ್ತು ತೋರಿಸಿದೆ. ರಾತ್ರಿ 11 ಗಂಟೆಯಿಂದ ಬುಧವಾರ ಬೆಳಗಿನ ಜಾವ ಮೂರು ಗಂಟೆಯವರೆಗೂ ಮಳೆ ಸುರಿದ ಪರಿಣಾಮವಾಗಿ ನಗರದ ಹಲವಡೆ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ನಗರದ ಕಿರುಮೃಗಾಲಯದಲ್ಲೂ ನೀರು ನಿಂತಿದ್ದರಿಂದ ಪ್ರಾಣಿಗಳಿಗೆ ತೊಂದರೆಯಾಯಿತು.

ನಗರದ ಕೌಲ್‌ಬಜಾರ್‌ ಪ್ರದೇಶದ ಮೊದಲನೇ ರೈಲು ಗೇಟ್‌ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಅದರೊಂದಿಗೆ, ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಸತ್ಯನಾರಾಯಣಪೇಟೆಯ ರೈಲ್ವೆ ಕೆಳಸೇತುವೆಯಲ್ಲೂ ಮೊಣಕಾಲುದ್ದ ನೀರು ನಿಂತು ವಾಹನ ಸವಾರರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಿದರು.

ಮೋಕಾ. ಗಾಂಧೀನಗರ, ಅನಂತಪುರ ರಸ್ತೆ, ನೆಹರು ಕಾಲೋನಿಗೆ ಸಂಪರ್ಕ ಕಲ್ಪಿಸುವ ಸತ್ಯನಾರಾಯಣಪೇಟೆಯ ರಸ್ತೆಯನ್ನು ಅವಲಂಬಿಸಿದ್ದವರಿಗೆ ಬುಧವಾರ ಸಂಚರಿಸುವುದು ಕಷ್ಟಕರವಾಗಿತ್ತು. ಕೌಲ್‌ಬಜಾರ್‌, ಹೊಸ ಬಸ್‌ ನಿಲ್ದಾಣ, ಹೊಸಪೇಟೆ ರಸ್ತೆತಲುಪಲು ಕ್ರೀಡಾಂಗಣ ರಸ್ತೆಯನ್ನು ಅವಲಂಬಿಸಿದವರಿಗೂ ಇದೇ ಬಗೆಯ ಬಿಸಿ ಮುಟ್ಟಿತ್ತು.

ADVERTISEMENT

ಮೃಗಾಲಯ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಕಿರು ಮೃಗಾಲಯದಲ್ಲೂ ನೀರು ತುಂಬಿಕೊಂಡು ಜಿಂಕೆಗಳು ನೀರಿನಲ್ಲೇ ಓಡಾಡುತ್ತಿದ್ದ ದೃಶ್ಯಗಳು ಮನಮೋಹಕವಾಗಿದ್ದವು.

‘ರಾತ್ರಿ ಸುರಿದ ಮಳೆಯಿಂದ ಯಾವುದೇ ಹಾನಿಯಾಗಿಲ್ಲ’ ಎಂದು ಬಳ್ಳಾರಿ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.