ಹೊಸಪೇಟೆ (ವಿಜಯನಗರ): ಜಿಲ್ಲೆಯಾದ್ಯಂತ ಬುಧವಾರ ಮಳೆಯ ಪ್ರಮಾಣ ತಗ್ಗಿದೆ. ಆದರೆ, ಈಗಾಗಲೇ ಸಾಕಷ್ಟು ಹಾನಿ ಅನುಭವಿಸಿರುವ ರೈತರ ಆತಂಕ ದೂರವಾಗಿಲ್ಲ.
ಭಾರಿ ಮಳೆಗೆ ತಾಲ್ಲೂಕಿನ ಹಂಪಿಯಲ್ಲಿ ಬಾಳೆ, ಧರ್ಮಸಾಗರದಲ್ಲಿ ಹತ್ತಿ, ಮೆಣಸಿನಕಾಯಿ, ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಯಲ್ಲಿ ಮೆಕ್ಕೆಜೋಳ, ಭತ್ತ, ರಾಗಿ ಗದ್ದೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಈಗ ಅದು ತಗ್ಗಿದೆ. ಆದರೆ, ಇನ್ನೂ ಎರಡ್ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ರೈತರ ಆತಂಕ ಕಡಿಮೆಯಾಗಿಲ್ಲ.
ಮಂಗಳವಾರ ಸುರಿದ ಭಾರಿ ಮಳೆಗೆ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆ, ಹಳ್ಳಗಳು ತುಂಬಿ ಹರಿದಿದ್ದವು. ತಾಲ್ಲೂಕಿನ ಜಿ. ನಾಗಲಾಪುರದಲ್ಲಿ ರೈತ ಉಚ್ಚಂಟಿ ಬೊಮ್ಮಪ್ಪ ಕೊಚ್ಚಿಕೊಂಡು ಹೋಗಿದ್ದರು. ಬುಧವಾರ ಮಳೆ ತಗ್ಗಿದ್ದರಿಂದ ಅಲ್ಲೆಲ್ಲಾ ನೀರಿನ ಹರಿವಿನ ಪ್ರಮಾಣ ಸಾಕಷ್ಟು ತಗ್ಗಿದೆ. ಬುಧವಾರ ಜನ ಯಾವುದೇ ಭಯವಿಲ್ಲದೇ ಓಡಾಡಿದರು. ಹೊಸಪೇಟೆ ನಗರದಲ್ಲಿ ಮಧ್ಯಾಹ್ನ ಕೆಲಕಾಲ ಜಿಟಿಜಿಟಿ ಮಳೆಯಾಗಿತ್ತು. ಇಡೀ ದಿನ ಕಾರ್ಮೋಡ ಕವಿದಿತ್ತು. ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿ, ಹರಪನಹಳ್ಳಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ವರ್ಷಧಾರೆಯಾಗಿದೆ.
ನದಿಗೆ 90 ಸಾವಿರ ಕ್ಯುಸೆಕ್ ನೀರು:
ಮಲೆನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಾಗುತ್ತಲೇ ಇದೆ. 105.788 ಟಿ.ಎಂ.ಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 100.992 ಟಿ.ಎಂ.ಸಿ ಅಡಿ ನೀರಿನ ಸಂಗ್ರಹವಿದೆ. 75,244 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಬುಧವಾರ ನದಿಗೆ 90 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಈಗಲೂ ಹಂಪಿ ಪುರಂದರದಾಸರ ಮಂಟಪ, ಕರ್ಮಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಮುಳುಗಿದ ಸ್ಥಿತಿಯಲ್ಲೇ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.