
ಎಫ್ಐಆರ್
(ಸಾಂದರ್ಭಿಕ ಚಿತ್ರ)
ಸಂಡೂರು: ತಾಲ್ಲೂಕಿನ ಸ್ವಾಮಿಹಳ್ಳಿಯ ‘ಸ್ಕಂದಗಿರಿ ಗಣಿ ಲಾರಿ ಮಾಲಿಕರ ಸಂಘ’ದ ಖಾತೆಯಲ್ಲಿದ್ದ ಲಕ್ಷಾಂತರ ಹಣ ದುರುಪಯೋಗವಾಗಿರುವ ಕುರಿತು ಚೋರುನೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಸಂಘದ ಪ್ರಧಾನ ಕಾರ್ಯದರ್ಶಿ, ಸ್ವಾಮಿಹಳ್ಳಿ ಗ್ರಾಮದ ಆದಿನಾರಾಯಣ ನೀಡಿದ ದೂರು ಆಧರಿಸಿ ಸಂಘದ ಅಧ್ಯಕ್ಷ ಒ. ಯರ್ರಿಸ್ವಾಮಿ, ಗೌರವಾಧ್ಯಕ್ಷ ಉಮಾಪತಿ, ಉಪಾಧ್ಯಕ್ಷ ಶಿವಕುಮಾರ್, ಜಂಟಿ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕಸ್ತೂರಿ ರೆಡ್ಡಿ, ಖಾಸಗಿ ಬ್ಯಾಂಕ್ನ ವ್ಯವಸ್ಥಾಪಕ ಸೇರಿದಂತೆ ಒಟ್ಟು 20 ಮಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.
ಸ್ವಾಮಿ ಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಲಾರಿ ಮಾಲೀಕರ ಹಿತಾಸಕ್ತಿಗಾಗಿ ‘ಸ್ಕಂದಗಿರಿ ಗಣಿ ಲಾರಿ ಮಾಲಿಕರ ಸಂಘ’ ಸ್ಥಾಪನೆ ಮಾಡಲಾಗಿತ್ತು. ಮೂರು ವರ್ಷಗಳಿಂದ ಅದಿರು ಸಾಗಣೆಯಿಂದ ಸಂಗ್ರಹವಾಗಿದ್ದ ಸುಮಾರು ₹74.96ಲಕ್ಷ ಹಣವನ್ನು ಬ್ಯಾಂಕ್ನಲ್ಲಿ ಇರಿಸಲಾಗಿತ್ತು.
ಸಂಘದ ಅಧ್ಯಕ್ಷರು ಇತರ ಪದಾಧಿಕಾರಿಗಳು ಪರಸ್ಪರ ಸಂಚುರೂಪಿಸಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಬ್ಯಾಂಕ್ನ ವ್ಯವಸ್ಥಾಪಕರೊಂದಿಗೆ ಸೇರಿ ಶಾಮೀಲಾಗಿ ಈ ಕೃತ್ಯ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.