ADVERTISEMENT

ಸಂಗನಕಲ್ಲು: ಮೂಲಸೌಕರ್ಯಕ್ಕೆ ಸೂಚನೆ

ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಬಿಜ್ಜೂರು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:53 IST
Last Updated 25 ಸೆಪ್ಟೆಂಬರ್ 2025, 2:53 IST
<div class="paragraphs"><p>ಬಳ್ಳಾರಿಯ ಸಂಗನಕಲ್ಲು ಪ್ರದೇಶಕ್ಕೆ ಕೆಎಂಇಆರ್‌ಸಿ ಎಂಡಿ. ಸಂಜಯ ಬಿಜ್ಜೂರು ಬುಧವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಜೊತೆಗಿದ್ದರು</p></div>

ಬಳ್ಳಾರಿಯ ಸಂಗನಕಲ್ಲು ಪ್ರದೇಶಕ್ಕೆ ಕೆಎಂಇಆರ್‌ಸಿ ಎಂಡಿ. ಸಂಜಯ ಬಿಜ್ಜೂರು ಬುಧವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಜೊತೆಗಿದ್ದರು

   

ಬಳ್ಳಾರಿ: ಆದಿಮಾನವರ ನೆಲೆಯಾಗಿದ್ದ ಸಂಗನಕಲ್ಲು ಗುಡ್ಡದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವಂತೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ ( ಕೆಎಂಇಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಬಿಜ್ಜೂರು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಂಗನಕಲ್ಲು ಬಳಿ ನೈಸರ್ಗಿಕ ಚಿಕಿತ್ಸೆ, ಯೋಗ ಮತ್ತು ಧ್ಯಾನ ಕೇಂದ್ರಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯು ಕೆಎಂಇಆರ್‌ಸಿಗೆ ಪ್ರಸ್ತಾವ ಸಲ್ಲಿಸಿದ್ದು, ತಾತ್ವಿಕ ಅನುಮೋದನೆಯೂ ಸಿಕ್ಕಿದೆ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿ ಮಾತನಾಡಿದರು.

ADVERTISEMENT

‘ಹಂತ–ಹಂತವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಗುಡ್ಡಕ್ಕೆ ತೆರಳುವ ಪಾದಚಾರಿಮಾರ್ಗ ಅಭಿವೃದ್ಧಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮೊದಲ ಹಂತದ ಡಿಪಿಆರ್‌ ಸಲ್ಲಿಸಬೇಕು. ಆನಂತರ, ಧ್ಯಾನ ಕೇಂದ್ರ ಮತ್ತು ಇತರೆ ಸೌಕರ್ಯ ಕಲ್ಪಿಸಬೇಕು’ ಎಂದು ತಿಳಿಸಿದರು. 

ಇದಕ್ಕೂ ಮುನ್ನ ಕೆಎಂಇಆರ್‌ಸಿ ಅಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಯೋಜನೆಗಳು, ಸಲ್ಲಿಕೆಯಾಗಿರುವ ಪ್ರಸ್ತಾವಗಳ ಕುರಿತು ವಿವಿಧ ಇಲಾಖೆಗಳೊಂದಿಗೆ ಪರಾಮರ್ಶನಾ ಸಭೆ ನಡೆಸಿದರು. ಬಳಿಕ ಕೆಲ ಅಂಗನವಾಡಿಗಳಿಗೆ ಭೇಟಿ, ಸುಸಜ್ಜಿತ ಅಂಗವಾಡಿಯಲ್ಲಿ ಏನೆಲ್ಲ ಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸಲಹೆ–ಸೂಚನೆ ನೀಡಿದರು. ಇದರ ಆಧಾರದಲ್ಲಿ ಡಿಪಿಆರ್‌ ಸಲ್ಲಿಸುವಂತೆಯೂ ಹೇಳಿದರು.  

‘ಮೆಗಾ ಡೇರಿ: ಡಿಪಿಆರ್‌ ಬಂದಿಲ್ಲ’ 

‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು ಬಳ್ಳಾರಿಯಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಮೆಗಾ ಡೇರಿಯ ಪ್ರಸ್ತಾವಕ್ಕೆ ಮಾತ್ರವೇ ಕೆಎಂಇಆರ್‌ಸಿಯಿಂದ ಅಂಗೀಕಾರ ಸಿಕ್ಕಿದೆ. ಸಂಸ್ಥೆಯಿಂದ ಇನ್ನು ಡಿಪಿಆರ್‌ ಸಲ್ಲಿಕೆಯಾಗಿಲ್ಲ’ ಎಂದು ಸಂಜಯ್‌ ಬಿಜ್ಜೂರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಡಿಪಿಆರ್‌ ಸಲ್ಲಿಕೆಯಾದ ಕೂಡಲೇ ಪರಿಶೀಲನೆ ನಡೆಸಲಾಗುವುದು. ಬಳ್ಳಾರಿ ಮತ್ತು ಸಂಡೂರಿನಲ್ಲಿ ಹಸುಗಳ ವಿತರಣೆಗೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಲು ಪಶುಪಾಲನಾ ಇಲಾಖೆಗೆ ಮನವಿ ಮಾಡಲಾಗಿದೆ. ಅಲ್ಲಿಂದ ಬರುವ ಸೂಚನೆ ಆಧರಿಸಿ ವಿತರಣೆ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.