ಹೊಸಪೇಟೆ: ‘ಅಕ್ಷರವೇ ಗೊತ್ತಿರದ ಕಾಲದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದವರು ಸಾವಿತ್ರಿಬಾ ಫುಲೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಚಿನ್ನಸ್ವಾಮಿ ಸೋಸಲೆ ತಿಳಿಸಿದರು.
ಜನನಿ ಮಹಿಳಾ ಸಬಲೀಕರಣ ಸಮಿತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾ ಫುಲೆ ಜನ್ಮದಿನ ಹಾಗೂ ನೈರ್ಮಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಾವಿತ್ರಿಬಾ ಫುಲೆ ಅವರು ಅವರ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸಿ ಮಹಿಳೆಯರಿಗೆ ವಿದ್ಯಾದಾನ ಮಾಡಿ ಹೊಸ ಮನ್ವಂತರಕ್ಕೆ ಕಾರಣವಾದರು. ಸಾವಿತ್ರಿ ಬಾ ಫುಲೆಯವರ ಜನ್ಮದಿನದಂದೇ ಶಿಕ್ಷಕರ ದಿನ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ’ ಎಂದು ಹೇಳಿದರು.
‘ಬಿ ದ ಚೇಂಜ್ ಹೊಸಪೇಟೆ’ ಸಂಸ್ಥೆಯ ಮುಖ್ಯಸ್ಥೆ ಸಂಪದ ಮಾತನಾಡಿ, ‘ಮುಟ್ಟಿನ ನೈರ್ಮಲ್ಯದ ಕುರಿತು ಇಂದಿಗೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ತಿಳಿವಳಿಕೆ ಕೊರತೆ ಇದೆ. ಅದನ್ನು ಹೋಗಲಾಡಿಸಿ, ಅದೊಂದು ಸಮಸ್ಯೆಯಲ್ಲ, ನೈಸರ್ಗಿಕ ಕ್ರಿಯೆ ಎನ್ನುವುದನ್ನು ತಿಳಿಸಬೇಕಿದೆ’ ಎಂದರು.
ಸಂಘಟನೆಯ ನೂತನ ಸದಸ್ಯೆಯರಿಗೆ ಶಾರದಾ ಕುಲಕರ್ಣಿ ಪ್ರತಿಜ್ಞಾವಿಧಿ ಬೋಧಿಸಿದರು. ಸಮಿತಿ ಅಧ್ಯಕ್ಷೆ ನಾಗವೇಣಿ ಹಂಪಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷೆ ರೇಖಾರಾಣಿ, ಪ್ರಧಾನ ಕಾರ್ಯದರ್ಶಿ ಹುಲಿಗೆಮ್ಮ, ಉಪಾಧ್ಯಕ್ಷರಾದ ಗೀತಾಶಂಕರ್, ರೋಫಿಯಾ, ಕಾರ್ಯದರ್ಶಿ ರಾಜೇಶ್ವರಿ, ಖಜಾಂಚಿ ಕ್ಯಾರೊಲಿನ್, ಸಂಚಾಲಕಿ ಸ್ವಾತಿ ಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.