ಹೊಸಪೇಟೆ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಾಲ್ಲೂಕಿನ ಕಮಲಾಪುರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯದ ಬೀಗವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಗುರುವಾರ ಒಡೆದು, ವಿದ್ಯಾರ್ಥಿನಿಯರಿಗೆ ಮುಕ್ತಗೊಳಿಸಿದ್ದಾರೆ.
₹10 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದರೂ ಅದು ವಿದ್ಯಾರ್ಥಿನಿಯರ ಬಳಕೆಗೆ ಮುಕ್ತಗೊಂಡಿರಲಿಲ್ಲ. ಈ ವಿಚಾರ ತಿಳಿದು ಸಮಿತಿಯ ಕಾರ್ಯಕರ್ತರು ಅಲ್ಲಿಗೆ ಹೋದರು. ಈ ಕುರಿತು ಪ್ರಶ್ನಿಸಿದಾಗ, ಗುತ್ತಿಗೆದಾರ ನಬಿ ಸಾಬ್, ‘₹10 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದೇನೆ. ಏಳು ತಿಂಗಳಿಂದ ಅದರ ಬಿಲ್ ಪಾವತಿಯಾಗಿಲ್ಲ. ಹಣ ಕೊಡುವವರೆಗೆ ಬಳಸುವುದು ಬೇಡ’ ಎಂದು ಹೇಳಿದರು.
ಅದಕ್ಕೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ. ಚಿದಾನಂದ, ‘ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಣದ ವಿಷಯವನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಬಗೆಹರಿಸಬೇಕು’ ಎಂದು ಹೇಳಿದರು. ಬಳಿಕ ಕಾರ್ಯಕರ್ತರು ಬೀಗ ಒಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.