ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಹೊಳಗುಂದಿ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ರಾಮಪ್ಪ ಉಪ್ಪಾರ್ ಮಂಡಿಸಿದ ಪ್ರಸಕ್ತ ಸಾಲಿನ ₹6.75 ಕೋಟಿ ಬಜೆಟ್ಗೆ ಸದಸ್ಯರು ಅನುಮೋದನೆ ನೀಡಿದರು.
ಸರ್ಕಾರದಿಂದ ಬರುವ ಅನುದಾನ, ಮಳಿಗೆ ಬಾಡಿಗೆ, ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಬರುವ ಆದಾಯ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಕುಡಿಯುವ ನೀರು ಪೂರೈಕೆ, ಚರಂಡಿ, ರಸ್ತೆ ನಿರ್ಮಾಣ, ಬೀದಿದೀಪ, ಗ್ರಾಮ ಪಂಚಾಯಿತಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆ ಬಾಡಿಗೆ ಪಡೆದ ವ್ಯಕ್ತಿ ₹40 ಸಾವಿರ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆ ಆರು ಬಾರಿ ನೊಟೀಸ್ ನೀಡಿದರೂ ಯಾವುದೇ ಸಮಜಾಯಿಸಿ ನೀಡಿಲ್ಲ. ಕೂಡಲೇ ಬಾಡಿಗೆ ಪಾವತಿಸಬೇಕು ಅಥವಾ ಪೊಲೀಸ್ ಭದ್ರತೆಯಲ್ಲಿ ಮಳಿಗೆ ತೆರವುಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ವಿಶ್ವ ಡೆವಲಪರ್ಸ್ಗೆ ಸೇರಿದ ಸರ್ವೇ ನಂಬರ್ 426ರ ಒಂದೂವರೆ ಎಕರೆ ಭೂಮಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಸದಸ್ಯರು ಒಮ್ಮತ ಸೂಚಿಸಿದರು.
ಅಂಗವಿಕಲರ ಸಮುದಾಯ ಭವನ ನಿರ್ಮಾಣ, ಮೂಲ ಸೌಕರ್ಯ, ಕುಡಿಯುವ ನೀರು, ಚರಂಡಿ ಸ್ವಚ್ಛತೆ ವಿಷಯಗಳು ಚರ್ಚೆಗೆ ಗ್ರಾಸವಾದವು. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು.
ಉಪಾಧ್ಯಕ್ಷೆ ರಾಜಮ್ಮ, ಸದಸ್ಯರಾದ ಎಸ್.ಎಂ. ಅಡಿವೆಯ್ಯ ಸ್ವಾಮಿ, ಗುಡಟ್ಟಿ ಈರಣ್ಣ, ಅನಿಲ್ ಕುಮಾರ್, ಕೆ.ವೀರೇಶ್, ವಿ.ರಮೇಶ್, ಕೆ.ಶಿವಪ್ಪ, ಎಂ.ಸ್ನೇಹಲತಾ, ಎನ್.ಶಿವಮ್ಮ, ಪಾರ್ವತಿ, ದಾನಮ್ಮ, ಲಕ್ಷ್ಮಮ್ಮ , ಸಲೀಂ, ಎನ್.ಹನುಮಂತ, ಕರಿಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.