
ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಭಾಗದ ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯ ಶೇ 90ರಷ್ಟು ಭೂಪ್ರದೇಶದಲ್ಲಿ ರೈತರು ಜೋಳ ಬೆಳೆಯುತ್ತಿದ್ದು, ಜೋಳದ ಒಣ ಸೊಪ್ಪೆ ಹೊಟ್ಟಿಗೆ ತೆಲಂಗಾಣದಲ್ಲಿ ತುಂಬಾ ಬೇಡಿಕೆ ಇದೆ.
ಆಂಧ್ರಪ್ರದೇಶದ ಮೂಲದ ಕೊರಪಾಟಿ ನರಸಿಂಹರೆಡ್ಡಿ ಎಂಬುವವರು ಪ್ರತಿ ಋತುಮಾನದಲ್ಲಿ ಜೋಳ ಒಕ್ಕಣೆ ಕಾರ್ಯ ಬಳಿಕ ಎಕರೆಗೆ ₹ 1,500 ಕೊಟ್ಟು ಗ್ರಾಮದ ರೈತರಿಂದ ಜೋಳದ ದಂಟು(ಸೊಪ್ಪೆ) ಖರೀದಿಸುತ್ತಾರೆ. ಬಳಿಕ ನಿಗದಿತ ಜಾಗ ಬಾಡಿಗೆ ಪಡೆದು ಬಣವೆ ಹಾಕುತ್ತಾರೆ.
‘ಕಳೆದ ಬಾರಿ 250ಎಕರೆ ಜೋಳದ ಸೊಪ್ಪೆ ಖರೀದಿ ಮಾಡಿದ್ದೆ. ಸದ್ಯ ಸೊಪ್ಪೆಯನ್ನು ಯಂತ್ರದ ಮೂಲಕ ಹೊಟ್ಟು ಮಾಡಿ ಚೀಲದಲ್ಲಿ ತುಂಬಿ ತೆಲಂಗಾಣದ ಹೈದ್ರಾಬಾದ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿರುವ ಗೋಶಾಲೆ, ರೈತರಿಗೆ, ಕುದುರೆ ಸಾಕಾಣಿಕೆ ಮಾಡುವವರಿಗೆ ಕೆ.ಜಿ ₹ 12ರಂತೆ ಮಾರಾಟ ಮಾಡುತ್ತಿರುವೆ. ಹೊಟ್ಟು ಮೂಟೆಗೆ ತುಂಬುವ ಮುನ್ನ ಅಲ್ಪ ಪ್ರಮಾಣದಲ್ಲಿ ನೀರು ಸಿಂಪರಣೆ ಮಾಡಲಾಗುತ್ತದೆ. ಬಳಿಕ ಒಂದು ಮೂಟೆಗೆ ಸುಮಾರು 50ಕೆ.ಜಿ ಹೊಟ್ಟು ಭರ್ತಿ ಮಾಡಲಾಗುತ್ತದೆ. ಒಂದು ಲಾರಿಯಲ್ಲಿ ಕನಿಷ್ಠ 6ಟನ್ನಂತೆ ದಿನ ಎರಡರಿಂದ ಮೂರು ಲಾರಿಗಳಲ್ಲಿ ಜೋಳದ ಹೊಟ್ಟು ತೆಲಂಗಾಣಕ್ಕೆ ರವಾನೆ ಮಾಡುತ್ತಿರುವುದಾಗಿ’ ರೆಡ್ಡಿ ವಿವರಿಸಿದರು.
‘ಸೊಪ್ಪೆ ಸಂಗ್ರಹಿಸಿದ ಸ್ಥಳದ ಬಾಡಿಗೆ, ಕೂಲಿ ಕಾರ್ಮಿಕರ ವೆಚ್ಚ, ಲಾರಿ ಸಾಗಾಣೆ ಖರ್ಚು, ಹೊಟ್ಟು ಮಾಡುವ ಯಂತ್ರ, ಡೀಸೆಲ್ ಸೇರಿದಂತೆ ಇತರೆ ಎಲ್ಲ ಖರ್ಚು ವೆಚ್ಚ ಸೇರಿ ಈ ಬಾರಿ ಕನಿಷ್ಠ ₹ 19ಲಕ್ಷ ಖರ್ಚಾಗುವ ನಿರೀಕ್ಷೆ ಇದೆ. ಹೊಟ್ಟು ಮಾರಾಟ ಬಳಿಕ ಸುಮಾರು ₹ 4ಲಕ್ಷ ನನ್ನ ಕೈಸೇರುವ ಲೆಕ್ಕಚಾರವಿದೆ’ ಎಂದು ತಿಳಿಸಿದರು.
ಜೋಳವನ್ನು ಬೆಂಬಲ ಬೆಲೆಯಡಿ ಸರ್ಕಾರ ಆರಂಭಿಸುವ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುತ್ತೇವೆ. ಸೊಪ್ಪೆಯನ್ನು ಮಾತ್ರ ಖರೀದಿದಾರರಿಗೆ ಕೊಡುತ್ತೇವೆ. ಅದರಿಂದ ಸ್ವಲ್ಪ ಆದಾಯವು ದೊರೆಯುತ್ತದೆ– ಮಲಕಪ್ಪನವರ ಬಾಲೇಸಾಬ್, ಜೋಳ ಬೆಳೆಗಾರ
‘ಶೀಘ್ರ ಪಚನಕ್ರಿಯೆಗೆ ಅನುಕೂಲ’
ವರ್ಷಪೂರ್ತಿ ಜಾನುವಾರುಗಳಿಗೆ ಹಸಿ ಮೇವು ದೊರೆಯುವುದಿಲ್ಲ. ಅಂಥ ಸಂದರ್ಭದಲ್ಲಿ ಜೋಳದ ಒಣ ದಂಟನ್ನು ಯಂತ್ರದ ಮೂಲಕ ಹೊಟ್ಟು ಮಾಡಿ ಅವುಗಳಿಗೆ ಆಹಾರವಾಗಿ ಕೊಡಲಾಗುತ್ತದೆ. ಅದರಲ್ಲಿ ಪ್ರೋಟಿನ್ ಕಾರ್ಬೋಹೈಡ್ರೇಟ್ ಅಂಶವಿರುವುದರಿಂದ ಪಚನಶಕ್ತಿ ಹೆಚ್ಚುತ್ತದೆ. ಜೊತೆಗೆ ಹಾಲಿನ ಪ್ರಮಾಣವು ಅಧಿಕವಾಗಲಿದೆ. ಕೆಲವರು ಜೋಳದ ಒಣ ಸೊಪ್ಪೆಯನ್ನು 1ರಿಂದ 2ಅಂಗುಲ ತುಣುಕುಗಳಾಗಿ ಕತ್ತರಿಸಿ ವೈಜ್ಞಾನಿಕವಾಗಿ ‘ರಸಮೇವು’ ಆಗಿ ಪರಿವರ್ತಿಸಿ ಜಾನುವಾರುಗಳಿಗೆ ಆಹಾರವಾಗಿಯೂ ಕೊಡುತ್ತಾರೆ’ ಎಂದು ಕಂಪ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಯು. ಬಸವರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.