ಬಳ್ಳಾರಿ: ತಾಲ್ಲೂಕಿನ ಸಂಗನಕಲ್ಲಿನ ಸಣ್ಣ ರಾಚಮ್ಮ ಗುಡ್ಡದಲ್ಲಿರುವ ಶಿಲಾಯುಗದ ರೇಖಾಚಿತ್ರಗಳ ಹತ್ತಿರದಲ್ಲಿನ ಬಂಡೆಯನ್ನು ಯಾರೋ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದು, ಈ ಕುರಿತು ಬಳ್ಳಾರಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗನಕಲ್ಲಿನ ಪ್ರಾಗೈತಿಹಾಸಿಕ ಕಾಲದ ಗುಡ್ಡದಲ್ಲಿ ಶಿಲಾಯುಗದ ರೇಖಾಚಿತ್ರಗಳು ಹಾಗೂ ಗೀರು ಚಿತ್ರಗಳಿವೆ. ಇದು ರಾಜ್ಯ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ. ಈ ಸ್ಮಾರಕದ ಸಣ್ಣ ರಾಚಮ್ಮ ಗುಡ್ಡದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಯಂತ್ರವನ್ನು ಬಳಸಿ ಕಲ್ಲನ್ನು ಕೊರೆದು ತೆಗೆದುಕೊಂಡು ಹೋಗಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಲಕೇರಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಆರ್.ಶೇಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಮಾರಕಗಳ ಹತ್ತಿರದ ಅಥವಾ ಅದಕ್ಕೆ ಹೊಂದಿಕೊಂಡಿರುವ 100 ಮೀಟರ್ ಮತ್ತು ನಂತರದ 200 ಮೀಟರ್ಗಳ ಅಂತರದಲ್ಲಿನ ಪ್ರದೇಶವನ್ನು ಗಣಿ ಕಾರ್ಯಾಚರಣೆ ಹಾಗೂ ಇತರೆ ನಿರ್ಮಾಣ ನಿಷೇಧಿತ ಮತ್ತು ರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.
ಆದ್ದರಿಂದ ರಾಜ್ಯ ಸಂರಕ್ಷಿತ ಸ್ಮಾರಕಗಳ ಹತ್ತಿರ ಯಾವುದೇ ಗಣಿಗಾರಿಕೆ, ಕಾಮಗಾರಿ, ಸ್ಮಾರಕಗಳಿಗೆ ಧಕ್ಕೆ ಉಂಟು ಮಾಡುವ, ವಿರೂಪಗೊಳಿಸುವ, ಕಾರ್ಯಚಟುವಟಿಕೆ ಕೈಗೊಂಡಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಶೇಜೇಶ್ವರ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.