ADVERTISEMENT

ತೆಕ್ಕಲಕೋಟೆ: ರಾತ್ರಿ -ಹಗಲು ಜೆಸ್ಕಾಂ ಕಚೇರಿಗೆ ಮುತ್ತಿಗೆ

ರೈತರಿಗೆ 3 ಪಾಳಿ ವಿದ್ಯುತ್: ಐದು ತಾಸು ಪೂರೈಕೆ ಗೊಂದಲ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 13:36 IST
Last Updated 17 ಅಕ್ಟೋಬರ್ 2023, 13:36 IST
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಕ್ರಾಸ್ ನ ಜೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದರು
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಕ್ರಾಸ್ ನ ಜೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದರು   

ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಕ್ರಾಸ್‌ನ ಜೆಸ್ಕಾಂ ಶಾಖಾ ಕಚೇರಿಗೆ ಐದು ತಾಸು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ, ರಾತ್ರಿ-ಹಗಲು ರೈತರು ಮುತ್ತಿಗೆ ಹಾಕಿದ ಘಟನೆ ಸೋಮವಾರ ಹಾಗೂ ಮಂಗಳವಾರ ನಡೆದಿದೆ.

ಸೋಮವಾರ ರಾತ್ರಿ ಜೆಸ್ಕಾಂ ಗೆ ಮುತ್ತಿಗೆ ಹಾಕಿದ ಶಾನವಾಸಪುರ ಗ್ರಾಮದ ರೈತರು ರಾತ್ರಿ ಪಾಳಿಯ ಐದು ತಾಸು ವಿದ್ಯುತ್ ಪೂರೈಕೆ ನಿಲ್ಲಿಸಿ ಹಗಲಿನಲ್ಲಿ ಯಥಾಪ್ರಕಾರ ಮುಂದುವರೆಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಸಿರಿಗೇರಿ ಪಿಎಸ್ಐ ಸದ್ದಾಂ ಹುಸೇನ್, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಮೂರ್ತಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಮಂಗಳವಾರ ಬೆಳಿಗ್ಗೆ ಕೊಂಚಗೇರಿ, ದಾಸಾಪುರ, ಎಚ್.ಹೊಸಳ್ಳಿ ಗ್ರಾಮಗಳ ರೈತರು ಜೆಸ್ಕಾಂಗೆ ಮುತ್ತಿಗೆ ಹಾಕಿದರು.

ADVERTISEMENT

ರೈತ ಕೊಂಚಗೇರಿ ಗೋವಿಂದಪ್ಪ ಮಾತನಾಡಿ,'ರೈತರ ಗಮನಕ್ಕೆ ತಾರದೇ ರಾತ್ರಿ 12 ಗಂಟೆಗೆ ಕರೆಂಟ್ ಕೊಟ್ಟಾರ, ರೈತರು ಯಾರೂ ಹೊಲಗಳಿಗೆ ನೀರು ಹರಿಸಿಲ್ಲ, ಬೆಳೆ ಉಳಿತೈತೇನ್ರಿ' ಎಂದು ಸಿರುಗುಪ್ಪ ಜೆಸ್ಕಾಂ ಎಇಇ ನವೀನ್ ಕುಮಾರ್ ಅವರಿಗೆ ಅಸಹಾಯಕತೆ ವ್ಯಕ್ತಪಡಿಸಿದರು.

'ರೈತ ಬಿತ್ತಿ ಬೆಳೆದರೆ ದೇಶ ಸುಖವಾಗಿರ್ತದೆ. ರೈತರ ಕರೆಂಟ್ ಕಳ್ಳತನ ಮಾಡಿದರೆ ಸರ್ಕಾರ ಉದ್ದಾರ ಆಗುತ್ತೇನ್ರಿ' ಎಂದು ದಾಸಾಪುರ ಶೇಖರಪ್ಪ ಬೇಸರ ವ್ಯಕ್ತಪಡಿಸಿದರು.

'ರೈತರಿಗೆ ಮುನ್ಸೂಚನೆ ನೀಡಿದೆ ರಾತ್ರಿ 12 ಗಂಟೆಗೆ ವಿದ್ಯುತ್ ನೀಡಿದಲ್ಲಿ ಹೊಲಗಳಿಗೆ ನೀರು ತುಂಬಿಸೋರ್ಯಾರು' ಎಂದು ಜೆಸ್ಕಾಂ ಜೆಇ ಕೇಶವ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.

ನಾಗರಾಜಗೌಡ, ಹೊನ್ನೂರ, ದಮ್ಮಲಿ ವೀರೇಶ, ಹರೀಶ, ದೊಡ್ಡಬಸಪ್ಪ, ತಿಪ್ಪೇರುದ್ರಗೌಡ, ಎಚ್.ವೀರೇಶ, ಎರ್ರೆಪ್ಪ, ಹೊನ್ನೂರಪ್ಪ, ಕೆ.ಮುದಿರೆಪ್ಪ, ಟಿ.ಹನುಮಂತ, ಪಿ.ರಾಜಕುಮಾರ್ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.

ಗೊಂದಲ ಆಗದ ರೀತಿಯಲ್ಲಿ ಎಲ್ಲ ಫೀಡರ್ ಗಳ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು

ನವೀನ್ ಕುಮಾರ್, ಎಇಇ, ಜೆಸ್ಕಾಂ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.