
ಬಳ್ಳಾರಿ: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ತಹಶೀಲ್ದಾರ್ರಾಗಿ ಕಾರ್ಯನಿರ್ವಹಿಸಿದರು.
ಕುರುಗೋಡು ತಾಲ್ಲೂಕಿನ ಗುತ್ತಿಗನೂರು ಸರ್ಕಾರಿ ಪೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸಾಜೀದ್ ಮತ್ತು ಗೆಣಿಕೆಹಾಳು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಗೌಸಿಯಾಬೇಗಂ ತಹಶೀಲ್ದಾರ್ರಾಗಿ ಕಾರ್ಯನಿರ್ವಹಿಸಿದರು. ತರಗತಿಯ ಪರೀಕ್ಷೆಗಳಲ್ಲಿ ಇಬ್ಬರೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದರಿಂದ ಅವರಿಗೆ ಈ ಅವಕಾಶ ಕಲ್ಪಿಸಲಾಗಿತ್ತು.
ಇಬ್ಬರೂ ವಿದ್ಯಾರ್ಥಿಗಳು, ಅಧಿಕಾರಿಗಳ ಸಭೆ ನಡೆಸಿದರು. ಕಡತ ಪರಿಶೀಲನೆ ಜೊತೆಗೆ 371 ಜೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದರು. ನಂತರ ಗ್ರಾಮಗಳಿಗೂ ಭೇಟಿ ನೀಡಿದರು.
‘ತಹಶೀಲ್ದಾರ್ರಾಗಿ ಕಾರ್ಯನಿರ್ವಹಿಸಿದ್ದು ತುಂಬಾ ಖುಷಿ ಕೊಟ್ಟಿತು. ತಹಶೀಲ್ದಾರ್ ಹುದ್ದೆಗೇರಿದರೆ, ಬಡವರಿಗೆ ಸಹಾಯ ಮಾಡಬಹುದು ಎಂಬುದು ಗೊತ್ತಾಯಿತು’ ಎಂದು ವಿದ್ಯಾರ್ಥಿಗಳಾದ ಸಾಜಿದ್ ಮತ್ತು ಗೌಸಿಯಾ ಬೇಗಂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆತ್ಮಸ್ಥೈರ್ಯ ತುಂಬಲು, ಮನೋಬಲ ವೃದ್ಧಿಸಲು, ನಾಯಕತ್ವಗುಣ ಬೆಳೆಸಲು ಮತ್ತು ಪ್ರತಿಭೆ ಪ್ರೋತ್ಸಾಹಿಸಲು ಮಕ್ಕಳಿಗೆ ಒಂದು ದಿನದ ಮಟ್ಟಿಗೆ ತಹಶೀಲ್ದಾರ್ರಾಗಲು ಅವಕಾಶ ಕಲ್ಪಿಸಲಾಯಿತು’ ಎಂದು ತಹಶೀಲ್ದಾರ್ ನರಸಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.