ADVERTISEMENT

‘ನಿರಂತರ ಅಧ್ಯಯನ ಯಶಸ್ಸಿನ ಗುಟ್ಟು’

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:47 IST
Last Updated 17 ಜನವರಿ 2019, 13:47 IST
ಕಲಬುರ್ಗಿ ಹೆಚ್ಚುವರಿ ಆಯುಕ್ತಾಲಯದ ಡಿ.ಡಿ.ಪಿ.ಐ. ಎನ್.ಎಚ್.ನಾಗೂರು ಮಾತನಾಡಿದರು
ಕಲಬುರ್ಗಿ ಹೆಚ್ಚುವರಿ ಆಯುಕ್ತಾಲಯದ ಡಿ.ಡಿ.ಪಿ.ಐ. ಎನ್.ಎಚ್.ನಾಗೂರು ಮಾತನಾಡಿದರು   

ಹೊಸಪೇಟೆ: ‘ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಅರ್ಧ ಗಂಟೆ ಓದಿದರೆ ಹತ್ತು ನಿಮಿಷ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಹಾಗೆ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು’ ಎಂದುಕಲಬುರ್ಗಿ ಹೆಚ್ಚುವರಿ ಆಯುಕ್ತಾಲಯದ ಡಿ.ಡಿ.ಪಿ.ಐ. ಎನ್.ಎಚ್.ನಾಗೂರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಲಬುರ್ಗಿ ಹೆಚ್ಚುವರಿ ಆಯುಕ್ತಾಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಭಾಗಿತ್ವದಲ್ಲಿ ಗುರುವಾರಇಲ್ಲಿನ ಕೊಟ್ಟೂರುಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದರು.

‘ಗಣಿತ, ವಿಜ್ಞಾನ, ಇಂಗ್ಲಿಷ್, ಹಿಂದಿ ಸೇರಿದಂತೆ ಯಾವ ವಿಷಯವೂ ಕಲಿಕೆಗೆ ಕಠಿಣವಾದುದಲ್ಲ. ನಿರಂತರ ಅಧ್ಯಯನದಿಂದ ಎಲ್ಲವೂ ಸುಲಭವಾಗಿ ಕಲಿಯಬಹುದು. ಅದರಲ್ಲಿ ಉತ್ತಮ ಸಾಧನೆ ಮಾಡಬಹುದು’ ಎಂದು ತಿಳಿಸಿದರು.

ADVERTISEMENT

‘ನಾನು ಕೂಡ ಬೇರೆಯವರಂತೆ ಚೆನ್ನಾಗಿ ಓದಬಲ್ಲೆ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಲ್ಲೆ ಎಂಬ ವಿಶ್ವಾಸ ಹೊಂದಿರಬೇಕು. ಕೀಳರಿಮೆ ಭಾವನೆ ಮನಸ್ಸಿನಲ್ಲಿ ಬೇರೂರಲು ಬಿಡಬಾರದು. ಅದು ಬೆಳೆದರೆ ಎಲ್ಲದರಲ್ಲೂ ನಾವು ಹಿನ್ನಡೆ ಅನುಭವಿಸುತ್ತೇವೆ’ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಮಾತನಾಡಿ, ‘ಬರುವ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಅತ್ಯಧಿಕ ಅಂಕ ಗಳಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕೆ ಶಿಕ್ಷಕರು ಎಲ್ಲ ರೀತಿಯ ನೆರವು ಕೊಡುತ್ತಾರೆ’ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಗುರುರಾಜ್,ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಚನ್ನವೀರಪ್ಪ, ಕಾರ್ಯದರ್ಶಿ ಕಂಪ್ಲಿ ಚಂದ್ರಪ್ಪ, ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ ಮುಖ್ಯಶಿಕ್ಷಕ ಶರಣಯ್ಯ,ಬಸವರಾಜ, ಪ್ರಭುರಾಜ ಪಾಟೀಲ ಇದ್ದರು. 11 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.