ADVERTISEMENT

ಶಿಕ್ಷಕನಿಂದ ಅಕಾಡೆಮಿ ಅಧ್ಯಕ್ಷರ ಮನೆ ನಿರ್ಮಾಣಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 14:19 IST
Last Updated 20 ಅಕ್ಟೋಬರ್ 2019, 14:19 IST
ಶಿಕ್ಷಕ ಮಧುಸೂದನ್‌ ಅವರು ಮಂಜಮ್ಮ ಜೋಗತಿ ಅವರಿಗೆ ನೆರವು ನೀಡಿದರು
ಶಿಕ್ಷಕ ಮಧುಸೂದನ್‌ ಅವರು ಮಂಜಮ್ಮ ಜೋಗತಿ ಅವರಿಗೆ ನೆರವು ನೀಡಿದರು   

ಹೊಸಪೇಟೆ: ಇಲ್ಲಿನ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಧುಸೂದನ ಅವರು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ಮನೆ ನಿರ್ಮಾಣಕ್ಕೆ ಭಾನುವಾರ ₹10,000 ನಗದು ನೆರವು ನೀಡಿದರು.

‘ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಗಲೀಕರಣದಲ್ಲಿ ಜೋಗತಿ ಮನೆ ಕಳೆದುಕೊಂಡಿದ್ದಾರೆ. ಸರ್ಕಾರದಿಂದ ಅವರಿಗೆ ಮನೆ ಮಂಜೂರಾಗಿದ್ದು, ಆ ಹಣದಿಂದ ಅರ್ಧ ಕಟ್ಟಡ ನಿರ್ಮಿಸಲು ಅವರಿಗೆ ಸಾಧ್ಯವಾಗಿದೆ. ವಾಸಿಸಲು ಮನೆಯಿಲ್ಲದ ವಿಷಯ ತಿಳಿದು, ನನ್ನ ಕೈಲಾದಷ್ಟು ಅವರಿಗೆ ನೆರವು ನೀಡಿರುವೆ’ ಎಂದು ಮಧುಸೂದನ್‌ ತಿಳಿಸಿದ್ದಾರೆ.

‘ಜೋಗತಿ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಂಜಮ್ಮ ಅವರಿಗೆ ಸಲ್ಲುತ್ತದೆ. ಅವರ ಕುರಿತು ವಿಜಯಪುರ ವಿಶ್ವವಿದ್ಯಾಲಯದಲ್ಲಿ ಪಠ್ಯ ಇದೆ. ಅನೇಕ ಪ್ರಶಸ್ತಿಗಳು ಸಂದಿವೆ. ಆದರೆ, ಅವರಿಗೆ ವಾಸಿಸಲು ಯೋಗ್ಯವಾದ ಮನೆಯಿಲ್ಲ ಎಂಬ ವಿಷಯ ತಿಳಿದು ಬಹಳ ಬೇಸರವಾಯಿತು’ ಎಂದಿದ್ದಾರೆ.

ADVERTISEMENT

‘ಮಂಜಮ್ಮ ಅವರು ಬೆಳೆಸುತ್ತಿರುವ ಕುಮಾರ ಮುತ್ತುರಾಜ್‌ ಎಂಬ ಬಡ ನಿರ್ಗತಿಕ ಬಾಲಕನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುತ್ತೇನೆ’ ಎಂದರು. ಮಧುಸೂದನ್‌ ಇತ್ತೀಚೆಗೆ ತಮ್ಮ ಒಂದು ತಿಂಗಳ ವೇತನವನ್ನು ಸಿ.ಎಂ. ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದರು.

ಹಿರಿಯ ರಂಗಭೂಮಿ ಕಲಾವಿದೆ ನಾಗರತ್ನಮ್ಮ, ಸಾಕ್ಷರತಾ ಸಂಯೋಜಕ ವರಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.