ADVERTISEMENT

ವಾರಕ್ಕೆ 2 ದಿನ ತಾಲ್ಲೂಕಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ: ಸಂಸದ ತುಕಾರಾಂ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:47 IST
Last Updated 14 ಅಕ್ಟೋಬರ್ 2025, 4:47 IST
<div class="paragraphs"><p>ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ&nbsp;‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ–ದಿಶಾ’ದ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಿರುವ ಸಂಸದ ಇ. ತುಕಾರಾಂ. </p></div>

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ–ದಿಶಾ’ದ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಿರುವ ಸಂಸದ ಇ. ತುಕಾರಾಂ.

   

ಬಳ್ಳಾರಿ: ‘ಜಿಲ್ಲಾಮಟ್ಟದ ಅಧಿಕಾರಿಗಳು ವಾರಕ್ಕೆ ಎರಡು ಬಾರಿ ಕಡ್ಡಾಯವಾಗಿ ತಾಲ್ಲೂಕುಗಳಿಗೆ ಭೇಟಿ ನೀಡಬೇಕು’ ಬಳ್ಳಾರಿ –ವಿಜಯನಗರ ಸಂಸದ ಇ. ತುಕಾರಾಂ ತಾಕೀತು ಮಾಡಿದರು. 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ–ದಿಶಾ’ದ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಕೇಂದ್ರದ ಕಾರ್ಯಕ್ರಮಗಳ ಪಾರಾಮರ್ಶೆ ನಡೆಸಿದ ಅವರು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.  

ADVERTISEMENT

‘ಜಿಲ್ಲಾಮಟ್ಟದ ಅಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಬೇಕು. ಮುಂದಿನ ಸಭೆಯಲ್ಲಿ ಈ‌ ಕುರಿತ ಮಾಹಿತಿಯನ್ನು ನೀಡಬೇಕು. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ತಾಲ್ಲೂಕುಗಳಿಗೆ ಭೇಟಿ ನೀಡುವಾಗ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು. ಅವರನ್ನು ಭೇಟಿಯಾಗಬೇಕು’ ಎಂದರು.   

ಗ್ರಾಮೀಣ ಭಾಗದಲ್ಲಿ ಎಷ್ಟು ಜನ ಸಂಖ್ಯೆ ಇದೆ, ಎಷ್ಟು ಗ್ರಾಮಗಳಿಗೆ ನೀರು ಪೂರೈಸಲಾಗಿದೆ, ಎಲ್ಲಿ ನೀರಿನ ಲಭ್ಯತೆ ಇದೆ ಎಂಬುದರ ವರದಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಯಿತು.

ಗ್ರಾಮಗಳಲ್ಲಿ ಕಸ ಸಂಗ್ರಹ ಸೂಕ್ತ ರೀತಿಯಲ್ಲಿ ನಡೆಯಬೇಕು. ಕೆಟ್ಟು ನಿಂತಿರುವ ಕಸದ ವಾಹನಗಳನ್ನು ಕೂಡಲೇ ರಿಪೇರಿ ಮಾಡಿ ಕಸ ಸಂಗ್ರಹ ಆರಂಭಿಸಬೇಕು. ನರೇಗಾ ಮೂಲಕ ಶಾಲೆಗಳ ಅಭಿವೃದ್ಧಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ಸಂಸದರು ಸೂಚಿಸಿದರು. 

ಬಳ್ಳಾರಿ ಹೊರವಲಯದ ಮುಂಡರಗಿ ವಸತಿ ಸಮುಚ್ಚಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸಂಸದ ತುಕಾರಾಂ ತಿಳಿಸಿದರು. 

ಸರ್ಕಾರಿ ಶಾಲೆಗಳ ಶೌಚಾಲಯ ನಿರ್ವಹಣೆಗೆ ಏಜೆನ್ಸಿ ನಿಗದಿ ಮಾಡುವ ಪ್ರಸ್ತಾಪವನ್ನು ಜಿಲ್ಲಾ ಪಂಚಾಯಿತಿ ಸಿಇಒ ಸಭೆಯ ಮುಂದಿಟ್ಟರು. ಏಜೆನ್ಸಿಗೆ ಎನ್‌ಎಂಡಿಸಿಯ ಸಿಎಸ್‌ಆರ್ ನಿಧಿಯ ಮೂಲಕ ಹಣ ಒದಗಿಸುವ ಭರವಸೆಯನ್ನು ಸಂಸದ ನೀಡಿದರು. 

ದಿಶಾ ಸಭೆಗೂ ಮೊದಲು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲು ಸ್ವೀಕಾರ ಸಭೆ ನಡೆಯಿತು. 

ನಾನೇ ಉದ್ಘಾಟಿಸುವೆ

ಎಪಿಎಂಸಿ ವತಿಯಿಂದ ನಿರ್ಮಿಸಲಾಗುತ್ತಿರುವ ಕೋಲ್ಡ್‌ ಸ್ಟೋರೇಜ್‌ಗೆ ಅಡಿಗಲ್ಲು ಹಾಕಲು ಸ್ಥಳೀಯ ಶಾಸಕರ ಸಮಯಕ್ಕೆ ಕಾಯುತ್ತಿರುವುದಾಗಿ ಹೇಳಿದ ಎಪಿಎಂಸಿ ಅಧಿಕಾರಿ ವಿರುದ್ಧ ಸಿಡಿಮಿಡಿಗೊಂಡ ಸಂಸದ, ‘ಇಲ್ಲಿ ರಾಜಕೀಯ ಬೆರೆಸಬೇಡ. ಯೋಜನೆ ಕೇಂದ್ರ ಸರ್ಕಾರದ್ದು. ನಾನೇ ಬಂದು ಉದ್ಘಾಟಿಸುತ್ತೇನೆ’ ಎಂದು ಹೇಳಿದರು. 

ಅಕ್ಕಿ ದಂಧೆ ಮಟ್ಟಹಾಕಿ: ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ದಂಧೆ ವಿರುದ್ಧ ಧೈರ್ಯದಿಂದ ದಾಳಿ ಮುಂದುವರಿಸಬೇಕು. ಹೊಸದಾಗಿ ಎಷ್ಟು ಪಡಿತರ ಅಂಗಡಿಗಳ ಅಗತ್ಯವಿದೆ ಎಂಬುದರ ಮಾಹಿತಿ ಸಂಗ್ರಹಿಸಬೇಕು’ ಎಂದು ಸಂಸದ ತುಕಾರಾಂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸೂಚಿಸಿದರು. 

ಮೇಯರ್‌ ನಂದೀಶ್‌, ಶಾಸಕಿ ಅನ್ನಪೂರ್ಣ, ಪರಿಷತ್‌ ಸದಸ್ಯ ಸತೀಶ್‌, ಜಿಲ್ಲೆಯ ಹಿರಿಯ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಹತ್ತಿರದ ಶಾಲೆಯ ಖಾಲಿ ಇರುವ ಕೊಠಡಿಗಳಿಗೆ ಸ್ಥಳಾಂತರಿಸಬೇಕು
ವೈ.ಎಂ.ಸತೀಶ್ ವಿಧಾನಪರಿಷತ್ ಸದಸ್ಯ

ತಿಂಗಳಲ್ಲಿ ಬೈಪಾಸ್‌ ಸಿದ್ಧ

ಬಳ್ಳಾರಿ ಬೈಪಾಸ್‌ ಯಾವಾಗ ಸಿದ್ಧವಾಗಲಿದೆ ಎಂಬ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಂದಲೇ ಸಂಸದ ತುಕಾರಾಂ ಉತ್ತರ ಕೊಡಿಸಿದರು. ಒಂದು ತಿಂಗಳಲ್ಲಿ ಬೈಪಾಸ್‌ ಸಿದ್ಧವಾಗಲಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ಅಧಿಕಾರಿಗಳು ಚಪ್ಪಾಳೆ ತಟ್ಟಿದರು. ಎನ್‌ಎಚ್‌ 67ನಿಂದ ಬಿಐಟಿಎಂ ಅಲ್ಲಿಪುರ ಸುಧಾ ಕ್ರಾಸ್ ವರೆಗಿನ‌ ರಸ್ತೆಯನ್ನು ನಾಲ್ಕುಪಥವಾಗಿಸಲು ಪ್ರಸ್ತಾವ ಸಿದ್ಧಪಡಿಸುವಂತೆ ಎನ್‌ಎಚ್‌ಎಐ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು.  ಸಿರುಗುಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ವೇಗ ನೀಡಬೇಕು ಎಂದು ಸಂಸದ ತಿಳಿಸಿದರು.

ಅವನು ಇವನು ಯಾವನು..

ನಾನು ಎಲ್ಲ ರಾಜಕಾರಣಿಗಳಂತೆ ಅಲ್ಲ ಎನ್ನುತ್ತಲೇ ದಿಶಾ ಸಭೆ ಆರಂಭಿಸಿದ ಸಂಸದ ಇ. ತುಕಾರಾಂ ಅದಕ್ಕೆ ತದ್ವಿರುದ್ಧವಾಗಿ ಸಭೆಯಲ್ಲಿ ನಡೆದುಕೊಂಡರು. ಎಲ್ಲ ರಾಜಕಾರಣಿಗಳಂತೇಯೇ ಅಧಿಕಾರಿಗಳಿಗೆ ಅತ್ಯಂತ ಸರಾಗವಾಗಿ ಏಕವಚನ ಪ್ರಯೋಗಿಸಿದರು. ಅವನು ಇವನು ನೀನು ಕತ್ತೆ ಕಾಯುತ್ತೀಯ ಚೆಂದಕ್ಕೆ ಬಂದಿದ್ದೀಯ ಎದ್ದು ಹೊರಗೆ ಹೋಗು ಎಂಬ ಪದಗಳನ್ನು ಧಾರಾಳವಾಗಿ ಬಳಸಿದರು. ಯಾರೊಬ್ಬರಿಗಾದರೂ ಅವರು ಬಹುವಚನ ಬಳಸಲಿಲ್ಲ. ಸಂಸದರ ಕಟುವಾದ ಮಾತುಗಳಿಗೆ ನಡುಗಿದ ಅಧಿಕಾರಿಗಳು ಕೈಲಿದ್ದ ಮಾಹಿತಿಯನ್ನೂ ಓದಲಾಗದೇ ತಡಬಡಾಯಿಸಿದರು. 

ಜಿಲ್ಲೆಯಲ್ಲಿ ಎರಡು ಧ್ರುವ? 

ಸಂಸದ ತುಕಾರಾಂ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ದಿಶಾ ಸಭೆಗೆ ಜಿಲ್ಲೆಯ ಶಾಸಕರ ಪೈಕಿ ಶಾಸಕಿ ಅನ್ನಪೂರ್ಣ ಮಾತ್ರ ಹಾಜರಾಗಿದ್ದರು. ಉಳಿದೆಲ್ಲ ಶಾಸಕರೂ ಗೈರಾಗಿದ್ದರು. ಇತ್ತೀಚೆಗೆ ನಡೆದ ಕೆಡಿಪಿ ಸಭೆಗೆ ಸಂಸದ ತುಕಾರಾಂ ಮತ್ತು ಶಾಸಕಿ ಅನ್ನಪೂರ್ಣ ಹೊರತುಪಡಿಸಿ ಉಳಿದೆಲ್ಲ ಶಾಸಕರೂ ಹಾಜರಾಗಿದ್ದರು. ಜಿಲ್ಲೆಯಲ್ಲಿ ಒಂದೇ ಪಕ್ಷದಲ್ಲಿ ಎರಡು ರಾಜಕೀಯ ಧ್ರುವಗಳು ಸೃಷ್ಟಿಯಾಗಿರುವ ಅನುಮಾನವನ್ನು ಈ ಸಭೆ ಸಾಬೀತು ಮಾಡಿದೆ ಎಂಬ ಮಾತು ಕೇಳಿಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.