ಹಂಪಿ (ಹೊಸಪೇಟೆ): ಹುಣ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಹಂಪಿ ತುಂಗಭದ್ರಾ ನದಿ ದಂಡೆಯಲ್ಲಿ ಸೋಮವಾರ ಸಂಜೆ ತುಂಗಾ ಆರತಿ ಕಾರ್ಯಕ್ರಮ ಸಂಪನ್ನಗೊಂಡಿತು.
ನದಿ ತಟದಲ್ಲಿ ನಿರ್ಮಿಸಿದ್ದ ಸುಂದರವಾದ ಕಿರು ವೇದಿಕೆಯಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿರೂಪಾಕ್ಷೇಶ್ವರ ಸ್ವಾಮಿ, ಪಂಪಾಂಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಂತ್ರಘೋಷಗಳ ನಡುವೆ ಸ್ವಾಮೀಜಿ, ಅರಣ್ಯ ಸಚಿವ ಆನಂದ್ ಸಿಂಗ್ ಅವರು ನದಿಗೆ ಬಾಗಿನ ಸಮರ್ಪಿಸಿದರು. ನಂತರ ತುಂಗೆಗೆ ಆರತಿ ಬೆಳಗಿದರು.
ನದಿ ದಂಡೆಯ ಮಂಟಪ, ಸ್ನಾನಘಟ್ಟವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಕು ಮರೆಯಾಗಿ ಚಂದಿರನ ಬೆಳದಿಂಗಳಿಂದ ನದಿ ನೀರು ಹಾಲ್ನೊರೆಯಂತೆ ಹರಿಯುತ್ತಿರುವುದು ಕಂಡು ಬಂತು. ಇದರ ನಡುವೆ ಭಕ್ತರು ಪುಷ್ಕರ ಪುಣ್ಯ ಸ್ನಾನ ಮಾಡಿದರು. ಬಳಿಕ ತುಂಗಾ ಆರತಿ ಕಾರ್ಯಕ್ರಮಕ್ಕೂ ಸಾಕ್ಷಿಯಾದರು.
ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್, ‘ತಾಯಿ ಪಂಪಾಂಬಿಕೆ ಹಾಗೂ ವಿರೂಪಾಕ್ಷೇಶ್ವರ ಸ್ವಾಮಿ ಆಶೀರ್ವಾದ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಇಚ್ಛಾಶಕ್ತಿಯಿಂದ ವಿಜಯನಗರ ಜಿಲ್ಲೆಯಾಗಿದೆ. ಅವರಿಗೆ ಸಮಸ್ತ ಜಿಲ್ಲೆಯ ಜನರ ಪರವಾಗಿ ಕೃತಜ್ಞತೆ ತಿಳಿಸುತ್ತೇನೆ’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಉಪವಿಭಾಗಾಧಿಕಾರಿಗಳಾದ ಶೇಕ್ ತನ್ವೀರ್ ಆಸಿಫ್, ಕೋನರೆಡ್ಡಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್. ಪ್ರಕಾಶ್ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.