ADVERTISEMENT

ಹೊಂಡದಲ್ಲಿ ಮುಳುಗಿ ಸಹೋದರರ ಸಾವು

ಕುರುಗೋಡು: ಗ್ರಾವೆಲ್ ಸಾಗಿಸಲು ಅಕ್ರಮವಾಗಿ ಗುಂಡಿ ತೆಗೆದ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:49 IST
Last Updated 4 ಸೆಪ್ಟೆಂಬರ್ 2021, 3:49 IST
ಮೌನೇಶ್
ಮೌನೇಶ್   

ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಇಬ್ಬರು ಬಾಲಕರು ಮಳೆನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಗುರುವಾರ ಸಂಜೆ ನಡೆದಿದೆ.

ಸಿರಿಗೇರಿ ಗ್ರಾಮದ ತಿಪ್ಪೇಸ್ವಾಮಿ ಮತ್ತು ಶ್ರೀದೇವಿ ದಂಪತಿ ಮಕ್ಕಳಾದ ಮೌನೇಶ್ (9) ಮತ್ತು ರವಿ (7) ಮೃತರು. ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡಕ್ಕೆ ಸ್ನೇಹಿತರೊಂದಿಗೆ
ಆಟವಾಡಲು ತೆರಳಿದ್ದರು.
ಮಳೆ ಸುರಿದ ಪರಿಣಾಮ ಎಲ್ಲರೂ ಮನೆಗಳ ಕಡೆಗೆ ಓಡಿ ಬಂದಿದ್ದಾರೆ. ಗುಡ್ಡದ ಪಕ್ಕದಲ್ಲಿ ಗ್ರಾವೆಲ್ (ಕೆಂಪುಮಣ್ಣು) ಸಾಗಿಸಲು ತೋಡಿದ್ದ ಗುಂಡಿಯಲ್ಲಿ ಮಳೆನೀರು ಸಂಗ್ರಹವಾಗಿದ್ದು, ಬಾಲಕರು ಆಕಸ್ಮಿಕವಾಗಿ ಗುಂಡಿಯಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾರೆ.

ಕತ್ತಲಾದರೂ ಮಕ್ಕಳು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ತಂದೆ ತಾಯಿ ಗುಡ್ಡದ ಬಯಲಿಗೆ ತೆರಳಿ ನೋಡಿದಾಗ ಗುಂಡಿಯಲ್ಲಿ ಮುಳುಗಿರುವುದು ಗೊತ್ತಾಗಿದೆ. ಮೂವರು ಮಕ್ಕಳಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.

ADVERTISEMENT

ಅಧಿಕಾರಿಗಳ ಭೇಟಿ: ಸಿರುಗುಪ್ಪ ತಹಶೀಲ್ದಾರ್ ಮಂಜುನಾಥ, ಮಹಿಳಾ ಮತ್ತು ಶಿಶುಆಭಿವೃದ್ಧಿ ಯೋಜ
ನಾಧಿಕಾರಿ ಜಲಾಲಪ್ಪ, ಸಿಪಿಐ ಕಾಳಿಕೃಷ್ಣ, ಪಿಎಸ್‍ಐ ಅಮರೆಗೌಡ, ಪಿಡಿಒ ರಾಜೇಶ್ವರಿ, ಗ್ರಾಮಲೆಕ್ಕಿಗ ಗುಡದೇಶ್, ಅಂಗನವಾಡಿ ಮೆಲ್ವಿಚಾರಕಿ ಹೇಮಾವತಿ ಘಟನೆ ಜರುಗಿದ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಅನಧಿಕೃತವಾಗಿ ಗ್ರಾವೆಲ್ ಸಾಗಿಸಲು ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡದ ಅಕ್ಕಪಕ್ಕದಲ್ಲಿ ಗುಂಡಿಗಳನ್ನು ತೋಡಲಾಗುತ್ತಿದೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಅವಘಡಗಳು ಸಂಭವಿಸುತ್ತಿವೆ. ಕಳೆದ ವರ್ಷವೂ ಇದೇ ರೀತಿ ಒಬ್ಬ ಬಾಲಕ ಮೃತಪಟ್ಟಿದ್ದ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು. ತಹಶೀಲ್ದಾರ್ ಮಂಜುನಾಥ ಪ್ರತಿಕ್ರಿಯಿಸಿ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.