ADVERTISEMENT

ಹೊಸಪೇಟೆ: ಪ್ರತ್ಯೇಕ ರಸ್ತೆ ಅಪಘಾತ– ಐದು ಸಾವು

ಉದ್ಯೋಗ ಖಾತ್ರಿ ಕೂಲಿ ಕೆಲಸದವರ ಮೇಲೆ ಬಂದೆರಗಿದ ಜವರಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 12:30 IST
Last Updated 25 ಏಪ್ರಿಲ್ 2019, 12:30 IST
ಬಸ್‌ ಡಿಕ್ಕಿ ಹೊಡೆದಿದ್ದರಿಂದ ಟ್ರಾಕ್ಟರ್‌ ಮಗುಚಿ ಬಿದ್ದಿರುವುದು–ಪ್ರಜಾವಾಣಿ ಚಿತ್ರ
ಬಸ್‌ ಡಿಕ್ಕಿ ಹೊಡೆದಿದ್ದರಿಂದ ಟ್ರಾಕ್ಟರ್‌ ಮಗುಚಿ ಬಿದ್ದಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ/ಸಂಡೂರು: ಬಳ್ಳಾರಿ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಐದು ಜನ ಮೃತಪಟ್ಟಿದ್ದಾರೆ. 37 ಜನ ಗಾಯಗೊಂಡಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಟ್ರಾಕ್ಟರ್‌ಗೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಚಿಲಕನಹಟ್ಟಿಯ ರೇಣುಕಮ್ಮ (35), ಯರ್ರಿಸ್ವಾಮಿ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಮ್ಮ (45) ಅವರನ್ನು ಬಳ್ಳಾರಿಯ ವಿಮ್ಸ್‌ಗೆ ಕೊಂಡೊಯುತ್ತಿದ್ದಾಗ ಮಾರ್ಗ ಮಧ್ಯೆ ಜೀವ ಹೋಗಿದೆ. 37 ಜನ ಗಾಯಗೊಂಡಿದ್ದು, 15 ಜನರನ್ನು ಹೆಚ್ಚಿನ ಚಿಕಿತ್ಸೆಗೆ ವಿಮ್ಸ್‌ಗೆ ಕಳುಹಿಸಿಕೊಡಲಾಗಿದೆ. ಉಳಿದವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಗೊಂಡವರೆಲ್ಲರೂ ಕೂಲಿ ಕಾರ್ಮಿಕರು. ‘ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಬಸವನದುರ್ಗ ಕೆರೆಯ ಹೂಳೆತ್ತುವ ಕೆಲಸಕ್ಕೆ ಬೆಳಿಗ್ಗೆ ಆರು ಗಂಟೆಗೆಚಿಲಕನಹಟ್ಟಿ ಗ್ರಾಮದಿಂದ ಮೂರು ಟ್ರಾಕ್ಟರ್‌ಗಳಲ್ಲಿ ಜನ ಹೋಗುತ್ತಿದ್ದರು. ಹಾರುವನಹಳ್ಳಿ ಬಳಿ ಹಿಂದಿನಿಂದ ಬಂದ ಬಸ್ಸು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಯೋಜನೆಯ ಅಡಿ ಮೃತರಿಗೆ ₹75 ಸಾವಿರ, ಸಾರಿಗೆ ಸಂಸ್ಥೆ ಪ್ರತ್ಯೇಕವಾಗಿ ₹50 ಸಾವಿರ ಪರಿಹಾರ ನೀಡಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಿತೀಶ್‌ ಅವರು ತಿಳಿಸಿದರು.

ADVERTISEMENT

ಸಂಡೂರು ವರದಿ:ತಾಲ್ಲೂಕಿನ ಧರ್ಮಾಪುರದ ಬಳಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ ಸವಾರ ಪಾಂಡುರಂಗ (27), ನಾಗರಾಜ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಣ್ಯಾಪುರದವರು. ಕೆಲಸ ಮುಗಿಸಿಕೊಂಡು ಊರಿಗೆ ಹೋಗುವಾಗ ಎದುರಿನಿಂದ ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಬಸ್‌ ಚಾಲಕ ನಿಯಂತ್ರಣ ಕಳೆದುಕೊಂಡು ವಿದ್ಯುತ್‌ ಕಂಬ, ಮರಕ್ಕೂ ಡಿಕ್ಕೆ ಹೊಡೆದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.