ADVERTISEMENT

ಅನುಮೋದನೆ ಸಿಗುವ ಮುಂಚೆಯೇ ಚರ್ಚೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಶ್ವವಿದ್ಯಾಲಯದ ನಡಾವಳಿ ಪ್ರತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 12:23 IST
Last Updated 14 ಸೆಪ್ಟೆಂಬರ್ 2019, 12:23 IST

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗ ತೆಗೆದುಕೊಂಡ ನಿರ್ಣಯಗಳಿಗೆ ಕುಲಪತಿಯವರ ಅನುಮೋದನೆ ಸಿಗುವ ಮುಂಚೆಯೇ ಚರ್ಚೆಗೆ ಗ್ರಾಸವಾಗಿದೆ.

ಅಷ್ಟೇ ಅಲ್ಲ, ನಿರ್ಣಯಗಳ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದಕ್ಕೆ ವಿಶ್ವವಿದ್ಯಾಲಯದ ಒಳಗಿನವರ ಕೈವಾಡವೇ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

‘ವಿದ್ಯಾರ್ಥಿಗಳು ವಸತಿ ನಿಲಯ, ಫೆಲೋಶಿಪ್‌, ಸಹಾಯ ಧನ ಸೇರಿದಂತೆ ಇತರೆ ಸೌಲಭ್ಯಗಳನ್ನು ಹಕ್ಕು ಎಂದು ಕೇಳುವಂತಿಲ್ಲ. ಸೌಲಭ್ಯ ಒದಗಿಸುವ ನಿರ್ಧಾರ ವಿಭಾಗಕ್ಕೆ ಸಂಬಂಧಿಸಿರುತ್ತದೆ. ಹೆಚ್ಚಿನ ಅಂಕ ಆಧರಿಸಿ ಮೊದಲ ಆದ್ಯತೆ ನೀಡಲಾಗುತ್ತದೆ‘ ಎಂದು 2019ರ ಜುಲೈ 31ರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇನ್ನಷ್ಟೇ ವಿಭಾಗವು ಕುಲಪತಿಗಳ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಆದರೆ, ಅದರ ಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸುದ್ದಿಯಾಗಿದೆ.

ADVERTISEMENT

ಈ ಕುರಿತು ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಮೊಗಳ್ಳಿ ಗಣೇಶ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅದಕ್ಕೆ ಕುಲಪತಿಗಳಿಂದ ಅನುಮೋದನೆಯೇ ಸಿಕ್ಕಿಲ್ಲ. ಹಿಂದಿನ ವರ್ಷ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅವರ ಸಂಶೋಧನೆ ಇನ್ನೂ ಪೂರ್ಣಗೊಂಡಿಲ್ಲ. ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಕೊಟ್ಟರೆ ಎದುರಾಗಬಹುದಾದ ಸಮಸ್ಯೆ ಕುರಿತು ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡಾವಳಿ ಪ್ರತಿ ಹರಿದಾಡಿದ ಬಳಿಕ, ಕುಲಪತಿಯವರ ಸಲಹೆ ಮೇರೆಗೆ ಸದ್ಯದ ಮಟ್ಟಿಗೆ ಅದನ್ನು ಕೈಬಿಡಲಾಗಿದೆ’ ಎಂದು ತಿಳಿಸಿದರು.

‘ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಸಭೆಯ ನಡಾವಳಿ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾದುದು. ಮೊದಲಿನಿಂದಲೂ ನಾನು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪರ ನಿಲುವು ಹೊಂದಿದವನು. ಮುಂದೆಯೂ ಹಾಗೆಯೇ ಇರುವವನು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.