ಕೂಡ್ಲಿಗಿ: ರೈತರಿಗೆ ಸಮರ್ಪಕ ಮಾಹಿತಿ ನೀಡುವುದರ ಜೊತೆಗೆ ಮಾರ್ಗದರ್ಶನವನ್ನು ಮಾಡಿ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೂರಿಯಾ ಗೊಬ್ಬರ ವಿತರಣೆ ಕುರಿತು ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಕೃಷಿ ಅಧಿಕಾರಿಗಳು, ರೈತರು ಹಾಗೂ ರಸ ಗೊಬ್ಬರ ಮಾರಾಟಗಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೂರಿಯಾ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ರೈತರು ಆತಂಕಪಡಬೇಕಾಗಿಲ್ಲ. ಯೂರಿಯಾ ಗೊಬ್ಬರದ ಬದಲಾಗಿ ನ್ಯಾನೋ ಗೊಬ್ಬರ ಬಳಕೆ ಮಾಡುವಂತೆ ಸ್ವತಃ ಪ್ರಧಾನ ಮಂತ್ರಿಯೇ ಸಲಹೆ ನೀಡಿದ್ದು, ಯೂರಿಯಾ ಪೂರೈಕೆಯಲ್ಲಿ ಶೇ 50ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಶೀಘ್ರದಲ್ಲಿಯೇ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಲಿದ್ದು, ಅದರಲ್ಲಿ ಅತಿ ಹೆಚ್ಚು ಭಾಗವನ್ನು ತಾಲ್ಲೂಕಿಗೆ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದ್ದರಿಂದ ರೈತರು ರೈತರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ ಅವರು, ರಸ ಗೊಬ್ಬರ ಹಾಗೂ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಮಾರಾಟಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಳ್ಳಿ ಹಳ್ಳಿಯಲ್ಲಿ ಯುರಿಯಾ ಗೊಬ್ಬರ ಸಿಗುತ್ತದೆ. ಆದರೆ ತಾಲ್ಲೂಕು ಕೇಂದ್ರದಲ್ಲಿ ಸಿಗುತ್ತಿಲ್ಲೆ ಏಕೆ? ಎಂದು ಕೆಲ ರೈತರು ಪ್ರಶ್ನಿಸಿದರು. ಹಳ್ಳಿಗಳಲ್ಲಿ ಬೇರೆ ಬೇರೆ, ಜಿಲ್ಲೆ, ಪಕ್ಕದ ರಾಜ್ಯಗಳ ಡೀಲರ್ಗಳ ಕಡೆಯಿಂದ ತಂದು ಮಾರಾಟ ಮಾಡುತ್ತಾರೆ ಎಂದು ರಸ ಗೊಬ್ಬರ ಮಾರಾಟಗಾರರು ಸಭೆಯಲ್ಲಿ ಹೇಳಿದರು.
’ನಿಮ್ಮಲ್ಲಿ ಏನೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು ಅಥವಾ ವಾಟ್ಸಪ್ ಗ್ರೂಪಲ್ಲಿ ಹಾಕಬೇಕು. ನೀವು ಏನೇ ಕೆಲಸ ಮಾಡಿದರೂ ಅದರಲ್ಲಿ ಹಾಕಿ’ ಎಂದು ಕೃಷಿ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ್ ಸೂಚನೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತೇಜಾವರ್ಧನ್, ಕೃಷಿ ತಾಂತ್ರಿಕ ಅಧಿಕಾರಿ ನೀಲನಾಯ್ಕ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಕೃಷಿಕ ಸಮಾಜದ ನಿರ್ದೇಶಕ ಎರ್ರಿಸ್ವಾಮಿ, ರಸಗೊಬ್ಬರ ಮಾರಾಟಗಾರರ ತಾಲ್ಲೂಕು ಅಧ್ಯಕ್ಷ ಕಾಟೇರ್ ನಾಗರಾಜ ಹಾಗೂ ತಾಲ್ಲೂಕಿನ ರಸ ಗೊಬ್ಬರ ಮಾರಾಟಗಾರರು, ರೈತ ಮುಖಂಡರು, ರೈತರು, ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.