
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ : ನಗರದ ಹಳೇ ಬಸ್ ನಿಲ್ದಾಣದಲ್ಲಿ ಸಾರಿಬಯಲು ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಗೌರಿ ಹುಣ್ಣಿಮೆ ದಿನ ಬುಧವಾರ ಸಂಜೆ 6.23ಕ್ಕೆ ಸಡಗರ, ಸಂಭ್ರಮದಿಂದ ನೆರವೇರಿತು.
ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಬ್ರಹ್ಮ ರಥೋತ್ಸವ ಜರುಗಿತು. ಸಂಜೆ ಮೇಗಳಪೇಟೆ ವೀರಭದ್ರ ದೇವಸ್ಥಾನದಲ್ಲಿರುವ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಹಳೇ ಬಸ್ ನಿಲ್ದಾಣದಲ್ಲಿರುವ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಕಲ ಪುಷ್ಪಗಳಿಂದ ಅಲಂಕರಿಸಿದ ರಥದ ಬಳಿ ಆಗಮಿಸಿ ಭಕ್ತಿ ಭಾವದಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಸಮ್ಮಾಳ, ನಂದಿಕೋಲು ಬಾಜ ಭಜಂತ್ರಿಗಳು ಮೆರವಣಿಗೆಗೆ ಮೆರುಗು ನೀಡಿದವು.
ಸಮ್ಮಾಳ ಕಲಾವಿದರು ವೀರಭದ್ರ ದೇವರ ಕುರಿತಾದ ಒಡಪು ಪ್ರದರ್ಶಿಸಿ ರಥೋತ್ಸವದ ದಿನ ಆಕರ್ಷಿಸಿದರು. ಭಕ್ತರಾದ ಗುರುಬಸವರಾಜ್ ಅವರು ವೀರಭದ್ರ ಸ್ವಾಮಿ ಧ್ವಜವನ್ನು ₹.1.10 ಲಕ್ಷಕ್ಕೆ ಹರಾಜಿನಲ್ಲಿ ಪಡೆದರು. ಬಳಿಕ ರಥಕ್ಕೆ ಚಾಲನೆ ನೀಡಲಾಯಿತು. ದೇವಾಲಯ ಮತ್ತು ರಥಕ್ಕೆ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರ ಗಮನ ಆಕರ್ಷಿಸಿತು. ಭಕ್ತರು ರಥಕ್ಕೆ ಹಣ್ಣು ಎಸೆದು ಭಕ್ತಿ ಸಲ್ಲಿಸಿದರೆ, ಕೆಲವರು ರಥದ ಚಕ್ರದ ಬಳಿ ತೆಂಗಿನಕಾಯಿ ಸೇವೆ ಸಲ್ಲಿಸಿದರು. ಧರ್ಮಕರ್ತ ಪಾಟೀಲ್ ಪ್ರವೀಣ್ ಕುಮಾರ, ಅರ್ಚಕರು, ಪುರವಂತರು, ಸಮ್ಮಾಳ ಕಲಾವಿದರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.