ADVERTISEMENT

ಹೊಸಪೇಟೆ: ವಿಶ್ವಕರ್ಮ ಜಯಂತಿ, ಭವ್ಯ ಮೆರವಣಿಗೆ

ಪ್ರಜಾವಾಣಿ ಚಿತ್ರ
Published 17 ಸೆಪ್ಟೆಂಬರ್ 2018, 13:25 IST
Last Updated 17 ಸೆಪ್ಟೆಂಬರ್ 2018, 13:25 IST
ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಸೋಮವಾರ ಹೊಸಪೇಟೆಯಲ್ಲಿ ನಡೆಯಿತು
ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಸೋಮವಾರ ಹೊಸಪೇಟೆಯಲ್ಲಿ ನಡೆಯಿತು   

ಹೊಸಪೇಟೆ: ವಿಶ್ವಕರ್ಮ ಜಯಂತಿಯನ್ನು ಸೋಮವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ಕಾಳಿಕಾ ದೇವಿ ದೇಗುಲದ ಬೆಳಿಗ್ಗೆ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಅಲಂಕರಿಸಿದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಕೆಲ ಮಹಿಳೆಯರು ಕೈಯಲ್ಲಿ ಆರತಿ ತಟ್ಟೆ ಹಿಡಿದುಕೊಂಡರೆ, ಕೆಲವರು ತಲೆ ಮೇಲೆ ಕಲಶಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಂಗಳವಾದ್ಯ ಮೊಳಗಿತು. ಮಹಾತ್ಮ ಗಾಂಧಿ ವೃತ್ತ, ಬಸ್‌ ನಿಲ್ದಾಣ, ಕಾಲೇಜು ರಸ್ತೆ, ಮೇನ್‌ ಬಜಾರ್‌ ಮೂಲಕ ಹಾದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಮೆರವಣಿಗೆ ಕೊನೆಗೊಂಡಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ನಾಗರಾಜ ಪತ್ತಾರ ಮಾತನಾಡಿ, ‘ವಿಶ್ವಕರ್ಮರಿಂದ ದೇವ ಲೋಕ ಸೃಷ್ಟಿಯಾಯಿತು ಎಂಬ ಉಲ್ಲೇಖ ಪುರಾಣದಲ್ಲಿ ಇದೆ. ಲಂಕಾ ಪಟ್ಟಣ, ದ್ವಾರಕಾ ನಗರ ನಿರ್ಮಾಣ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ವಿಶ್ವಕರ್ಮ ಎಂದರೆ ಎಲ್ಲವನ್ನೂ ಸಾಧಿಸುವವನು. ಎಲ್ಲದರ ಮೂಲ ಕೃತ್ರು’ ಎಂದು ಹೇಳಿದರು.

ADVERTISEMENT

‘ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಬಹಳ ದೊಡ್ಡದಿದೆ. ಅದರಲ್ಲೂ ಕಲಾವಿದರಾಗಿ ಸಮಾಜಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆ. ಆದರೆ, ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ’ ಎಂದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಕಾಂಗ್ರೆಸ್‌ ಮುಖಂಡ ಧರ್ಮೇಂದ್ರ ಸಿಂಗ್‌ ಉದ್ಘಾಟಿಸಿದರು. ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ. ವೀರಭದ್ರಪ್ಪಾಚಾರ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ ಇದ್ದರು. ಬಿ. ವಿಜಯಕುಮಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.