ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶದ ತುಂಗಭದ್ರಾ ನದಿ ಪ್ರವಾಹದಿಂದ ಮೂರು ದಿನ ಮುಳುಗಡೆಯಾಗಿದ್ದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲಿನ ನೀರು ಮಂಗಳವಾರ ಇಳಿಮುಖವಾಗಿದ್ದರಿಂದ ಬೆಳಿಗ್ಗೆ ಸುಮಾರು 7 ರಿಂ 11.30ರವರೆಗೆ ಪಾದಚಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಕಂಪ್ಲಿ ಭಾಗದ ಕೆಲವರು ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ಲು ಮಾಗಾಣಿ ಪ್ರದೇಶದ ಹೊಲ ಗದ್ದೆಗಳ ಕೃಷಿ ಚಟುವಟಿಕೆಗಳಿಗೆ ತೆರಳಿದ್ದು, ಮರಳಿ ಬರಲು ತೊಂದರೆ ಅನುಭವಿಸಬೇಕಾಯಿತು. ನದಿಯ ಪ್ರವಾಹದಿಂದ ಸೇತುವೆ ರಕ್ಷಣಾ ಕಂಬಿಗಳು ಅಲ್ಲಲ್ಲಿ ಜಖಂಗೊಂಡಿದ್ದರೆ. ಕೆಲವೆಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಸೇತುವೆ ಮೇಲಿನ ಭಾರಿ ತ್ಯಾಜ್ಯ, ಜಲಸಸ್ಯಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು. ಸೇತುವೆಯ ಒಂದು ಭಾಗದಲ್ಲಿ ಕರ್ನಾಟಕ ಆಂಧ್ರ ಸಂಪರ್ಕಿಸುವ ಆಫ್ಟಿಕಲ್ ಪೈಬರ್ ಕೇಬಲ್ (ಒಎಫ್ಸಿ)ಗೆ ಹಾನಿಯಾಗಿದ್ದು, ಹೊಸಪೇಟೆ ಬಿಎಸ್ಎನ್ಎಲ್ ಕಚೇರಿಯ ಎಇ ಮತ್ತು ಸಿಬ್ಬಂದಿ ಪರೀಕ್ಷಿಸಿ ತಾತ್ಕಾಲಿಕ ದುರಸ್ತಿಗೊಳಿಸಿದರು.
’ಜಲಾಶಯದಿಂದ ನದಿಗೆ ಮತ್ತೆ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ’ ಎಂದು ತಹಶೀಲ್ದಾರ್ ಶಿವರಾಜ ತಿಳಿಸಿದರು.
ನದಿಯ ಪ್ರವಾಹದಿಂದ ತೇಲಿಬಂದ ಭಾರಿ ಹಸಿರು ತ್ಯಾಜ್ಯ ಪಟ್ಟಣಕ್ಕೆ ನೀರೆತ್ತುವ ಜಾಕ್ವೆಲ್ಗಳಲ್ಲಿ ಸಿಲುಕಿಕೊಂಡು ಪಂಪ್ಗೆ ನೀರು ಪೂರೈಕೆಯಾಗುವುದು ಸ್ಥಗಿತಗೊಂಡಿತ್ತು. ಮೂರು ಜಾಕ್ವೆಲ್ಗಳಲ್ಲಿ ಸಿಲುಕಿದ ತ್ಯಾಜ್ಯ ತೆರವು ಕಾರ್ಯಾಚಾರಣೆ ನಡೆದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.