ಹೊಸಪೇಟೆ: ನಗರ ಹೊರವಲಯದ ಗುಂಡಾ ಸಸ್ಯೋದ್ಯಾನದಲ್ಲಿ ಮಂಗಳವಾರ 64ನೇ ವಿಶ್ವ ವನ್ಯಜೀವಿ ಸಪ್ತಾಹ ಆಚರಿಸಲಾಯಿತು.
ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು ಮಾತನಾಡಿ, ‘ಜಗತ್ತಿನಲ್ಲಿರುವ ಎಲ್ಲ ವನ್ಯಜೀವಿಗಳು ಸುರಕ್ಷಿತವಾಗಿದ್ದರೆ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ಜೀವ ವೈವಿಧ್ಯ ನಾಶವಾದರೆ ಮನುಕುಲವೂ ನಾಶವಾಗುತ್ತದೆ’ ಎಂದು ಹೇಳಿದರು.
‘ಮಿತಿ ಮೀರಿದ ಜನಸಂಖ್ಯೆಯಿಂದ ವನ್ಯಜೀವಿಗಳ ಆವಾಸ ಸ್ಥಾನ ನಾಶವಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳು ಕುಗ್ಗುತ್ತಿವೆ. ಇದರ ನೇರ ಪರಿಣಾಮ ವನ್ಯಜೀವಿಗಳ ಮೇಲಾಗುತ್ತಿದೆ. ಕಾಡು, ವನ್ಯಜೀವಿಗಳ ರಕ್ಷಣೆ ಇಂದಿನ ತುರ್ತು’ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಮೋಹನ್, ‘ಪರಿಸರ ಮತ್ತು ವನ್ಯಜೀವಿಗಳಿಂದ ಎಲ್ಲವೂ ಸಮತೋಲನದಿಂದ ಕೂಡಿದೆ. ಎರಡರಲ್ಲಿ ಒಂದು ಇಲ್ಲದಿದ್ದರೂ ಅಸಮತೋಲನ ಉಂಟಾಗುತ್ತದೆ’ ಎಂದರು.
‘ನೆರವಿನ ಕೈಗಳು’ ಸಂಸ್ಥೆ ಅಧ್ಯಕ್ಷ ಕೆ. ಕಲೀಂ, ನಿವೃತ್ತ ಪ್ರಾಚಾರ್ಯ ಕೆ. ಲಕ್ಷ್ಮಣ, ಸಹಾಯಕ ವಲಯ ಅರಣ್ಯ ಅಧಿಕಾರಿ ಎಲ್. ರಾಜಶೇಖರ್, ಸಹಾಯಕ ವಲಯ ಅರಣ್ಯ ಅಧಿಕಾರಿ ಕನಕಪ್ಪ, ವನಪಾಲಕ ನಾಗರಾಜ್ ಇದ್ದರು. ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.