ADVERTISEMENT

‘ಯುವಕರಿಗೆ ನಾಯಕತ್ವ, ಕೌಶಲ ಅಗತ್ಯ’

ಜೆಸಿಐ ನೂತನ ಪದಾಧಿಕಾರಿಗಳಿಂದ ಪದಗ್ರಹಣ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 13:26 IST
Last Updated 17 ಜನವರಿ 2021, 13:26 IST
ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇಂಡಿಯಾ (ಜೆಸಿಐ) 24ನೇ ವಲಯದ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು
ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇಂಡಿಯಾ (ಜೆಸಿಐ) 24ನೇ ವಲಯದ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು   

ಹೊಸಪೇಟೆ: ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇಂಡಿಯಾ (ಜೆಸಿಐ) 24ನೇ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಜರುಗಿತು.

ಜೆಸಿಐ 51ನೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಎ.ವಿ.ವಿಜಯಕುಮಾರ ಮಾತನಾಡಿ, ‘ಪರಿಣಾಮಕಾರಿ ಭಾಷಣ , ಶಾಲಾ ಮಕ್ಕಳಿಗೆ ಪರೀಕ್ಷೆ ನಿಭಾಯಿಸುವ ಕಲೆ, ಆರೋಗ್ಯ ಶಿಬಿರ, ಯೋಗ ಶಿಬಿರ, ಪರಿಸರ ಸ್ವಚ್ಛತೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅವಕಾಶ ವಂಚಿತ ಪ್ರತಿಭಾವಂತರಿಗೆ ತಾಂತ್ರಿಕ ಜ್ಞಾನ ನೀಡಲಾಗುವುದು’ ಎಂದು ತಿಳಿಸಿದರು.

ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಮಾತನಾಡಿ, ‘2020ರ ಕೊರೊನಾ ವರ್ಷದಲ್ಲೂ ಕೂಡ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು. ನೂತನ ಅಧ್ಯಕ್ಷರು ಇನ್ನೂ ಹುರುಪಿನಿಂದ ಅದನ್ನು ಮುನ್ನಡೆಸಿಕೊಂಡು ಹೋಗುವರು ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

ಪಿಡಿಐಟಿ ಪ್ರಾಂಶುಪಾಲ ಎಸ್‌.ಎಂ. ಶಶಿಧರ್‌ ಮಾತನಾಡಿ, ‘ಯುವಜನರಲ್ಲಿ ನಾಯಕತ್ವದ ಗುಣ ಬಹುಮುಖ್ಯ, ಯುವಜನರಲ್ಲಿ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಜೆಸಿಐ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದೆ’ ಎಂದರು.

‘ವಿಶ್ವದಲ್ಲಿ ಭಾರತ ದೊಡ್ಡ ಯುವದೇಶವಾಗಿ ಹೊಮ್ಮುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 54ರಷ್ಟು ಜನಸಂಖ್ಯೆ 25ಕ್ಕಿಂತ ಕಡಿಮೆ ವಯಸ್ಸಿನವರು ಇದ್ದಾರೆ. ಅವರಲ್ಲಿ ನಾಯಕತ್ವ ಹಾಗೂ ಜೀವನ ಕೌಶಲ ಬೆಳೆಸುವ ಅಗತ್ಯವಿದೆ’ ಎಂದು ತಿಳಿಸಿದರು.

ಜೆಸಿಐ ವಲಯ ಅಧ್ಯಕ್ಷ ಪ್ರಶಾಂತ ದೊಡ್ಡಮನೆ ಪ್ರಮಾಣ ವಚನ ಬೋಧಿಸಿದರು. ಕೆ.ಇಂದ್ರಜಿತ್ ಸಿಂಗ್, ಹರೀಶ್ ಬಡಿಗೇರ್, ವೆಂಕಟೇಶ ಬಾಬು, ಪ್ರಜ್ಞಾಮ ನೇಹಾಲ್ ಶರಣಪ್ಪ, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.