ADVERTISEMENT

ಉಚಿತ ಪ್ಲಾಸ್ಟಿಕ್ ಕ್ರೇಟ್ ವಿತರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ದೊಡ್ಡಬಳ್ಳಾಪುರ: ತರಕಾರಿ ಸಾಗಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಪ್ಲಾಸ್ಟಿಕ್ ಕ್ರೇಟ್‌ಗಳನ್ನು ಉಚಿತವಾಗಿ ನೀಡಲಾಗುವುದು. ಇವುಗಳ ಬಳಕೆಯಿಂದ ತರಕಾರಿ ಹಾಳಾಗುವುದನ್ನು ತಪ್ಪಿಸಬಹುದಾಗಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಲಿ ಸಹಾಯಕ ವ್ಯವಸ್ಥಾಪಕ ಬಚ್ಚೇಗೌಡ ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಗುರುವಾರ ನಡೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರದ ನಿರ್ಲಕ್ಷ್ಯದಿಂದಾಗಿ ಕೃಷಿಕರ ಸಂಖ್ಯೆ ಶೇ.55ಕ್ಕೆ ಕುಸಿದಿದೆ. ಕೃಷಿ ಸಂಸ್ಕೃತಿ ಎಲ್ಲಾ ಸಂಸ್ಕೃತಿಗಳ ಮೂಲ. ಇದನ್ನು ಮರೆತರೆ ದೇಶದ ಪ್ರಗತಿಗೆ ಮಾರಕವಾಗಲಿದೆ ಎಂದು ಹೇಳಿದರು.

ಡಾ.ಮುಕುಂದ್ ಮಾತನಾಡಿ, ತರಕಾರಿ ಬೆಳೆಗಳಿಗೆ ನೀಡಿದಷ್ಟೇ ಮಹತ್ವವನ್ನು ರೈತರು ಹಣ್ಣು ಬೆಳೆಗಳಿಗೂ ಆದ್ಯತೆ ನೀಡಬೇಕು. ಸೀಬೆ, ಜಮ್ಮು ನೇರಳೆ, ಪನ್ನೇರಳೆ, ಹಲಸು, ಅಂಜುರಾ ಸೇರಿದಂತೆ ಹಲವಾರು ಹಣ್ಣುಗಳಿಗೆ ಇವತ್ತು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹಣ್ಣುಗಳ ಬೆಳೆಯನ್ನು ಬೆಳೆಯುವುದರಿಂದ ನೀರು, ಕಾರ್ಮಿಕರ ಕೊರತೆ ಎಲ್ಲವೂ ಉಳಿತಾಯವಾಗಲಿದೆ. ಅಲ್ಲದೆ ರೈತರು ಆರ್ಥಿಕವಾಗಿಯೂ ಲಾಭ ಗಳಿಸಬಹುದು ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀ ನಾರಾಯಣ್, ತರಕಾರಿ ಸಾಗಣೆಗೆ ಅಗತ್ಯ ಇರುವ ಕ್ರೇಟ್‌ಗಳನ್ನು ರೈತರಿಗೆ ನೀಡಲು ಅನುಕೂಲವಾಗುವಂತೆ ಮಾಡಲು ಎಪಿಎಂಸಿ ವತಿಯಿಂದಲೂ ಹಣ ನೀಡಲಾಗುವುದು ಎಂದರು.

ಎಪಿಎಂಸಿ ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಕಾರ್ಯದರ್ಶಿ ಜಿ.ಚಿಕ್ಕನರಸಿಂಹ ರೆಡ್ಡಿ, ಕೃಷಿ ವಿಜ್ಞಾನಿ ಡಾ.ನರಸೇಗೌಡ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.