ADVERTISEMENT

‘ಕಾಂಗ್ರೆಸ್ ಸರ್ಕಾರ: ಐದು ವರ್ಷದಲ್ಲಿ ಕಲ್ಯಾಣ ಪರ್ವ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 5:05 IST
Last Updated 27 ಅಕ್ಟೋಬರ್ 2017, 5:05 IST

ದೇವನಹಳ್ಳಿ: ರಾಜ್ಯದ ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಐದು ವರ್ಷದಲ್ಲಿ ಭರವಸೆಯಂತೆ ಜನತೆಗೆ ಕಲ್ಯಾಣ ಪರ್ವ ಮಾಡಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.

ತಾಲ್ಲೂಕು ಅರದೇಶನಹಳ್ಳಿ ಗ್ರಾಮದಲ್ಲಿ ’ಮನೆಮನೆಗೆ ಕಾಂಗ್ರೆಸ್’ ಅಭಿಯಾನದಲ್ಲಿ ಮತದಾರರಿಗೆ ಪಕ್ಷದ ಸಾಧನೆಯ ಕಿರು ಹೊತ್ತಿಗೆ ನೀಡಿ ಮಾತನಾಡಿದ ಅವರು, ಜನಾಭಿಪ್ರಾಯಕ್ಕೆ ಮುಕ್ತವಾಗಿರುವ ಹಾಗೂ ಜನಪರ ನಿಲುವುಗಳಿಗೆ ಹೆಚ್ಚಿನ ಮನ್ನಣೆ ನೀಡುವ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ದೂರದೃಷ್ಟಿ ಚಿಂತನೆಯನ್ನು ಒಳಗೊಂಡಿವೆ ಎಂದು ತಿಳಿಸಿದರು.

ಕನಿಷ್ಟರಲ್ಲಿ ಕನಿಷ್ಟರಿಗೆ ಹೆಚ್ಚಿನ ಸವಲತ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ದೊರಕುತ್ತಿದೆ. ನಾಲ್ಕು ವರ್ಷಗಳ ಸಾಧನೆಯ ಹಾದಿಯಲ್ಲಿ ಜನಸಾಮಾನ್ಯರು ಜನಪರ ಸರ್ಕಾರವೆಂದು ಈಗಲೇ ಗುರುತಿಸಿದ್ದಾರೆ. ಇದರ ಪರಿಣಾಮವಾಗಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ನುಡಿದಂತೆ ನಡೆದ ಸರ್ಕಾರದ ಯೋಜನೆಗಳೆಲ್ಲವು ನಿರೀಕ್ಷಿಸಿದಂತೆ ಫಲ ನೀಡುತ್ತಿವೆ. ಕಳೆದ ಮೂರು ವರ್ಷಗಳ ಬರಗಾಲವನ್ನು ಅತ್ಯಂತ ದಕ್ಷತೆಯಿಂದ ಸಮರ್ಥವಾಗಿ ಸರ್ಕಾರ ನಿರ್ವಹಣೆ ಮಾಡಿದೆ, ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಹನ್ನೆರಡು ಭಾಗ್ಯ ಯೋಜನೆಗಳು, ಮಾತೃ ಪೂರ್ಣಯೋಜನೆ, ಋಣಮುಕ್ತ, ಶುದ್ಧನೀರಿನ ಘಟಕ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ, ಹನಿ ನೀರಾವರಿಗೆ ಉತ್ತೇಜನೆಯಂತಹ ಅನೇಕ ಯೋಜನೆಗಳನ್ನು ಪಾರದರ್ಶಕವಾಗಿ ಫಲಾನುಭವಿಗಳಿಗೆ ಇಂದು ದೊರಕುತ್ತಿವೆ ಎಂದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ, ಮತದಾರರು ಅಭಿವೃದ್ಧಿ ಯೋಜನೆಗಳನ್ನು ಪರಿಗಣಿಸಬೇಕು ಎಂದರು. ಬಯಾಪ ಸದಸ್ಯ ಶ್ರೀರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರದ ಅಭಿವೃದ್ಧಿಯೋಜನೆಗಳನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಹತಾಶೆ ಭಾವನೆಯಿಂದ ಆರೋಪಿಸುತ್ತಿವೆ, 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಾಳಿ ಬೀಸಲ್ಲ ಎಂದರು.

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಲ್ಲಿ ಜೈಲಿಗೆ ಹೋದವರನ್ನು ಜನತೆ ಮರೆತಿಲ್ಲ ಎಂದರು. ಬ್ಲಾಕ್ ಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ, ಮುಖಂಡ ಸುಬ್ಬಣ್ಣ, ಹನುಮಂತರಾಜು, ನರೇಂದ್ರ ಧನುಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.