ADVERTISEMENT

ಕಾನೂನು ಮೀರಿದರೆ ಕಠಿಣ ಕ್ರಮ

ಸರ್ವಪಕ್ಷಗಳ ಸಭೆಯಲ್ಲಿ ಸಿಪಿಐ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 11:17 IST
Last Updated 8 ಮಾರ್ಚ್ 2014, 11:17 IST

ದೊಡ್ಡಬಳ್ಳಾಪುರ: ಚುನಾವಣೆ ಹಿನ್ನೆಲೆ­ಯಲ್ಲಿ ಯಾರಾದರೂ ಕಾನೂನು ಸುವ್ಯ­ವ­ಸ್ಥೆಗೆ ಅಡ್ಡಿಯುಂಟು ಮಾಡಿ­ದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ­ಲಾಗುವುದು ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ.ಶಿವಾರೆಡ್ಡಿ ಎಚ್ಚರಿಸಿದರು.

ಶುಕ್ರವಾರ ನಗರದ ಗ್ರಾಮಾಂತರ ಪೊಲೀಸ್‌ ಠಾಣೆ ಆವರಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣಾ ನೀತಿ ಸಂಹಿತೆ ಪಾಲನೆಯಲ್ಲಿ ಚುನಾವಣ ಅಧಿಕಾರಿ­ಗಳ ಆದೇಶವೇ ಅಂತಿಮ­ವಾಗಿರುತ್ತದೆ. ಅವರು ಪ್ರತಿ ದಿನ ನೀಡುವ ಆದೇಶ­ಗಳನ್ನು ಕಟ್ಟುನಿಟ್ಟಾಗಿ ಪಾಲಿಸ­ಲಾ­ಗು­ತ್ತದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಪಾಲನೆ ಕಡೆಗೆ ಎಲ್ಲ ರಾಜಕೀಯ ಪಕ್ಷಗಳು ಪ್ರಥಮ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಚುನಾವಣಾ ಸಭೆ, ಸಮಾರಂಭ ನಡೆಸುವ ಬಗ್ಗೆ ಪೂರ್ವಾ­ನು­ಮತಿ ಪಡೆಯುವುದು ಕಡ್ಡಾಯ. ನಗರದ ಸಿದ್ದಲಿಂಗಯ್ಯ ವೃತ್ತ, ಸರ್ಕಾರಿ ಆಸ್ಪತ್ರೆ ವೃತ್ತ, ತಾಲ್ಲೂಕು ಕಚೇರಿ ವೃತ್ತ ಹಾಗೂ ಡಿಕ್ರಾಸ್‌ನಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ಸಂಘಟನೆ­ಗಳು ಸಭೆಗಳನ್ನು ನಡೆಸಲು ಅನುಮತಿ ನೀಡು­ವುದಿಲ್ಲ.ಚುನಾವಣಾ ಪ್ರಚಾರದ ವಾಹನ ಪರವಾನಗಿ, ಸಭೆ ಪೂರ್ವಾ­ನು­ಮತಿ ಸೇರಿದಂತೆ ವಿವಿಧ ಪರವಾನಗಿ­ಗಳನ್ನು ಪಡೆಯಲು ಪ್ರತಿ ರಾಜಕಿಯ ಪಕ್ಷ­ಗಳವರೂ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿ­ಕೊಳ್ಳು­ವುದು ಒಳಿತು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ  ಜಿ.ಲಕ್ಷ್ಮೀ­ಪತಿ, ಆರ್‌.ಚಂದ್ರತೇಜಸ್ವಿ, ವಡ್ಡರ­­­ಹಳ್ಳಿ, ಟಿ.ಎನ್‌.ಪ್ರಭುದೇವ್‌, ಪ್ರಚಾರ ಸಭೆ, ವಾಹನ ಪರವಾನಿಗಿ ಸೇರಿದಂತೆ ನೀತಿ ಸಂಹಿತೆ ಪಾಲನೆಗೆ ಅನುಮತಿ ಪಡೆಯುವ ಎಲ್ಲಾ ವ್ಯವಸ್ಥೆ­ಯನ್ನು ತಾಲ್ಲೂಕು ಕಚೇರಿ­ಯಲ್ಲಿ ನೀಡಬೇಕು. ಒಂದೊಂದು ಅನು­ಮತಿಗೂ ಒಂದೊಂದು ಕಚೇರಿಗೆ ಅಲೆ­ದಾಡು­­ವುದನ್ನು ತಪ್ಪಿಸಬೇಕು. ಚುನಾ­ವಣಾ ಪ್ರಚಾರ ಸಭೆಗಳನ್ನು ನಡೆಸಲು ನಗರದ ಭಗತ್‌ಸಿಂಗ್‌ ಕ್ರೀಡಾಂಗಣ ಬಳಕೆಗೆ ಅನುಮತಿ ನೀಡಬೇಕು ಎಂದು ಸಲಹೆಗಳನ್ನು ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಕೆ.ಬಿ.ಸಿದ್ದಲಿಂಗಯ್ಯ ಮಾತ­ನಾಡಿ, ‘ಚುನಾವಣಾ ನೀತಿ ಸಂಹಿತೆ ಪಾಲನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಕೈಪಿಡಿ­ಗಳನ್ನು ನೀಡಲಾಗುವುದು’ ಎಂದರು.

ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ನವೀನ್‌ಕುಮಾರ್‌, ನಗರ ಠಾಣೆ ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್‌ ಕೃಷ್ಣಕುಮಾರ್‌, ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿ­ಯರ್‌ ಟಿ.ಬಿ.ಗಂಗರಾಜು, ನಗರ ಸಭೆಯ ಆರೋಗ್ಯ ನಿರೀಕ್ಷ ಸೂಲಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.