ADVERTISEMENT

ಕುಂಬಳ ಬಳ್ಳಿಯಲ್ಲಿ ಕಂಡ ನಾಗರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ದೇವನಹಳ್ಳಿ: ಪ್ರಕೃತಿಗೂ, ವಿಸ್ಮಯಕ್ಕೂ ಅವಿನಾಭಾವ ಸಂಬಂಧವಿದೆ.  ಪೃಕೃತಿಯ ಒಡಲಲ್ಲಿ ಅಡಗಿರುವ ಅದೆಷ್ಟೋ ಅಚ್ಚರಿಗಳು ಬಹಿರಂಗವಾದಾಗ ಸಾರ್ವಜನಿಕ ವಲಯದಲ್ಲಿ ಧಾರ್ಮಿಕ ಭಾವಗಳನ್ನು, ವಿಸ್ಮಯಗಳನ್ನು ಹೊಸೆದು ತಲೆಗೊಂದು ಕತೆ ಕಟ್ಟುವುದು ಹೊಸದೇನಲ್ಲ. ಇಂಥದ್ದೊಂದು ಕುತೂಹಲ ಕೆರಳಿಸುವ ಸಂಗತಿ ಇಲ್ಲಿನ ಮಿಸುಗಾನಹಳ್ಳಿ ರೈತರೊಬ್ಬರ ಜಮೀನಿನಲ್ಲಿ ನಡೆದಿದೆ.

ಕುಂಬಳ ಬಳ್ಳಿಯೊಂದು ಏಳು ತಲೆ ಸರ್ಪದ ಆಕಾರದಲ್ಲಿ ಗೋಚರಿಸುವ ಮೂಲಕ ಸುತ್ತಮುತ್ತಲ ಪ್ರದೇಶದ ರೈತರನ್ನು ಬೆಚ್ಚಿ ಬೀಳಿಸಿದ್ದು, ಈಗ ಧಾರ್ಮಿಕ ರೂಪ ಪಡೆದಿದೆ. ಆದಿ ಶೇಷನೇ ಕುಂಬಳಬಳ್ಳಿಯಲ್ಲಿ ಅವತಾರ ಎತ್ತಿದ್ದಾನೆ ಎಂದು ಕಲ್ಪಿಸಿಕೊಂಡ ಜನರು ಕುಂಬಳ ಬಳ್ಳಿಗೆ ಹಾಲೆರೆದು. ಮಂಗಳಾರತಿ ಎತ್ತಿ ಭಗವಂತನನ್ನು ಕಂಡರು.

ಘಟನೆಯ ವಿವರ: ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದ ನರಸಿಂಹಯ್ಯ ಎಂಬುವವರ ಜಮೀನಿನ ಬದುವಿನಲ್ಲಿ ಕೆಲವು ತಿಂಗಳುಗಳ ಹಿಂದೆ ಕುಂಬಳಕಾಯಿ ಬೀಜ ಬಿತ್ತಲಾಗಿತ್ತು. ಬೃಹತ್ತ ಆಕಾರದ ಬಳ್ಳಿಯಾಗಿ ಹಬ್ಬಿದ ಇದು ಸಾಮಾನ್ಯ ಬಳ್ಳಿಗಳಂತೆ ಬೆಳೆಯುತ್ತಾ ಹೋಯಿತು. ಕಳೆದ ವಾರ ನರಸಿಂಹಯ್ಯ ಅವರ ಜಮೀನಿನಲ್ಲಿ ಕಳೆ ಕೀಳುವಾಗ ಅದೊಂದು ಅಚ್ಚರಿ ಕಾದಿತ್ತು. ಕುಂಬಳಬಳ್ಳಿ ವಿಚಿತ್ರವಾಗಿ ಬೆಳೆಯುವ ಮೂಲಕ ಎಲ್ಲರಲ್ಲಿ ಕುತೂಹಲ ತಂದೊಡ್ಡಿತ್ತು. ಸೂಕ್ಷ್ಮವಾಗಿ ಗಮನಿಸಿದಾಗಿ ಬಳ್ಳಿ ಏಳು ತಲೆಯ ನಾಗರಹಾವಿನಂತೆ ಕಂಡಿತು. 

ಬಳ್ಳಿಯು 12 ರಿಂದ 14 ಅಡಿ ಉದ್ದವಿದೆ. ಹೆಡೆ ಎತ್ತಿದ ಸರ್ಪದಂತೆ ಕಾಣುವ ಈ ಬಳ್ಳಿಯ ವಿಷಯ ತಿಳಿಯುತ್ತಿದ್ದಂತೆಯೇ ಸುತ್ತ ಮುತ್ತಲ ಗ್ರಾಮಗಳಿಂದ ಜನರು ಸಾಗರೋಪಾದಿಯಲ್ಲಿ ಬಂದು ಹಾಲೆರೆದು ಪೂಜೆ ಮಾಡಿದರು. ಬಳ್ಳಿಯ ಮೇಲ್ಭಾಗ ತಲೆಯಂತೆಯೂ, ಕೆಳ ಭಾಗ ಬಾಲದಂತೆಯೂ ಇರುವುದು ಇದರ ವಿಶೇಷ. ಮುಗ್ದ ಭಕ್ತರಿಗೆ ಬಾಯ್ತೆರೆದ ಆದಿಶೇಷನಂತೆ ಗೋಚರಿಸಿದ್ದು ಮತ್ತೊಂದು ವಿಶೇಷ.

`ಕಳೆ ಕಿಳುವ ದಿನ ನೋಡಿದಾಗ ಕೇವಲ ನಾಗರಹಾವು ಮಲಗಿದಂತೆ ಬಳ್ಳಿ ಬೆಳೆದಿತ್ತು.
ಆದರೆ ಮರು ದಿನ ನೋಡಿದಾಗಿ ಹಾವು ಬಾಯಿ ತೆರದಿರುವಂತೆ ಇತ್ತು. ಕೂಡಲೆ ಎಲ್ಲರಿಗು ವಿಷಯ ಮುಟ್ಟಿಸಿದೆ. ಈಗ ನಮ್ಮ ಜಮೀನು ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ~ ಎನ್ನುತ್ತಾರೆ ಜಮೀನಿನ ಒಡತಿ ನರಸಿಂಹಯ್ಯನ ಪತ್ನಿ ರತ್ನಮ್ಮ.

`ಇಂಥ ಆಶ್ವರ್ಯಕರ ಪ್ರಸಂಗಗಳು ಈ ವರೆಗೆ ಗ್ರಾಮದಲ್ಲಿ ನಡೆದಿಲ್ಲ~ ಎನ್ನುತ್ತಾರೆ ನೋಡಲು ಬಂದ ಕೃಷ್ಣಪ್ಪ, ಆನಂದ್ ಇತರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.